ಸಾರಾಂಶ
ಅಗರ್ತಲಾ: ಕಾಂಗ್ರೆಸ್ ಸರ್ಕಾರವಿರುವ ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ವಿಪಕ್ಷ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಬಿಜೆಪಿ ಆಡಳಿತದ ತ್ರಿಪುರಾದಲ್ಲಿ ಇದರ ತದ್ವಿರುದ್ಧ ಪರಿಸ್ಥಿತಿ ಇದೆ. ಪ್ರತಿಪಕ್ಷ ಕಾಂಗ್ರೆಸ್ ಅದರ ವಿರುದ್ಧ ಅಭಿಯಾನ ನಡೆಸುತ್ತಿದೆ.
ಸ್ಮಾರ್ಟ್ ಮೀಟರ್ ಅಳವಡಿಕೆ ವಿರೋಧಿಸಿ ರ್ಯಾಲಿ, ಪ್ರತಿಭಟನೆ, ಅಭಿಯಾನಗಳನ್ನು ಆಯೋಜಿಸುತ್ತಿರುವ ತ್ರಿಪುರಾ ಕಾಂಗ್ರೆಸ್, ಕರ್ನಾಟಕದ ಬಿಜೆಪಿ ಮಾದರಿಯಲ್ಲೇ ಅಧಿಕ ವಿದ್ಯುತ್ ಬಿಲ್ ಬರುವ ಸಾಧ್ಯತೆ, ಪಾರದರ್ಶಕತೆಯ ಕೊರತೆ ಮತ್ತು ಕಾರ್ಯವಿಧಾನದ ಅಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ರಾಜೀಬ್ ಭಟ್ಟಾಚಾರ್ಜಿ, ‘ವಿರೋಧ ಪಕ್ಷವು ಸ್ಮಾರ್ಟ್ ಮೀಟರ್ ಬಗ್ಗೆ ದುರುದ್ದೇಶಪೂರಿತ ಪ್ರಚಾರವನ್ನು ನಡೆಸುತ್ತಿತ್ತು. ಇದರಿಂದ ಜನರು ದಾರಿ ತಪ್ಪಬಾರದು. ಆ ಸಾಧನಗಳು ವಿದ್ಯುತ್ ಬಳಕೆಯ ನಿಖರವಾದ ರೀಡಿಂಗ್ ನೀಡುತ್ತವೆ. ಅನೇಕ ರಾಜ್ಯಗಳಲ್ಲಿ ಈಗಾಗಲೇ ಸ್ಮಾರ್ಟ್ ಮೀಟರ್ ಅಳವಡಿಸಲಾಗಿದೆ’ ಎಂದು ಹೇಳಿದ್ದಾರೆ. ಜತೆಗೆ, ‘ಅವುಗಳಲ್ಲಿ ಯಾವುದೇ ಸಮಸ್ಯೆ ಕಂಡುಬಂದಲ್ಲಿ ಅವನ್ನು ಸರಿಪಡಿಸಲು ವಿಶೇಷ ಕಾರ್ಯಪಡೆಯನ್ನೂ ರಚಿಸಲಾಗಿದೆ. ದೂರುಗಳನ್ನು ಸ್ವೀಕರಿಸಲು ಸಹಾಯವಾಣಿ ಸಂಖ್ಯೆಯನ್ನೂ ಒದಗಿಸಲಾಗಿದೆ’ ಎಂದರು.