ಸಾರಾಂಶ
ರಾಂಚಿ: ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ, ಜಾರ್ಖಂಡ್ನ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಬಂಧಿಸಿದೆ. ಇತ್ತೀಚೆಗಷ್ಟೇ ಆಲಂರ ಆಪ್ತ ಕಾರ್ಯದರ್ಶಿ ಸಂಜೀವ್ ಕುಮಾರ್ರ ಮನೆ ಕೆಲಸದವರ ಮನೆಯಲ್ಲಿ 37 ಕೋಟಿ ರು. ನಗದು ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ಈ ಬಂಧನ ನಡೆದಿದೆ.
ನಗದು ಪತ್ತೆ ಪ್ರಕರಣ ಮಂಗಳವಾರ ಆಲರಂನನ್ನು 9 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು. ಬುಧವಾರ ಮತ್ತೆ 6 ಗಂಟೆ ವಿಚಾರಣೆ ನಡೆಸಿದ ಬಳಿಕ ಈ ಬಂಧನ ಮಾಡಲಾಗಿದೆ.
ಏನು ಪ್ರಕರಣ: ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಚಿವರೂ ಸೇರಿ ಅಧಿಕಾರಿಗಳು ವಿವಿಧ ಕಾಮಗಾರಿ ಮತ್ತು ಕೆಲಸ ಮಾಡಿಕೊಡಲು ಕಮಿಷನ್ ರೂಪದಲ್ಲಿ ಲಂಚ ಪಡೆದುಕೊಂಡಿದ್ದಾರೆ ಎಂಬುದು ಇಡಿ ಆರೋಪವಾಗಿದೆ. ಇದರ ಸಂಬಂಧ ಕಳೆದ ವಾರ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸಂಜೀವ್ ಕುಮಾರ್ ಲಾಲ್ರನ್ನೂ ಬಂಧಿಸಿತ್ತು. ಜೊತೆಗೆ ಪ್ರಕರಣದ ಸಂಬಂಧ ಇದುವರೆಗೂ ಇಡಿ ಆಲಂಗೀರ್ ಆಪ್ತರ ಮನೆಗಳ ಮೇಲೆ ದಾಳಿ ಮಾಡಿ 36.75 ಕೋಟಿ ರು.ಗೂ ಹೆಚ್ಚು ನಗದು ಹಣವನ್ನು ವಶಪಡಿಸಿಕೊಂಡಿದೆ.