ಪಂಜಾಬ್‌ ಕಾಂಗ್ರೆಸ್‌ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಧರ್ಮಸೋತ್‌ ಅವರು ತಮ್ಮ ಅಧಿಕಾರಾವಧಿಯಲ್ಲಿ ಅರಣ್ಯ ಹಗರಣ ನಡೆಸಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ಬಂಧಿಸಿದೆ.

ಚಂಡೀಗಢ: ಅರಣ್ಯ ಇಲಾಖೆಯಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದ ಅಡಿಯಲ್ಲಿ ಪಂಜಾಬ್‌ನ ಮಾಜಿ ಅರಣ್ಯ ಸಚಿವ ಕಾಂಗ್ರೆಸ್‌ ನಾಯಕ ಎಸ್‌.ಎಸ್‌. ಧರ್ಮಸೋತ್‌ರನ್ನು ಜಾರಿ ನಿರ್ದೇಶನಾಲಯ ಸೋಮವಾರ ಬಂಧಿಸಿದೆ.

ಧರ್ಮಸೋತ್‌ ಅರಣ್ಯ ಸಚಿವರಾಗಿದ್ದ (2017-21)ರ ಅವಧಿಯಲ್ಲಿ ಇಲಾಖೆಯಲ್ಲಿ ವರ್ಗಾವಣೆ ದಂಧೆ, ಖೇರ್‌ ಮರಗಳ ಕಡಿಯುವ ಪರವಾನಗಿ, ಅನುಮತಿ ಪತ್ರ, ನಿರಾಪೇಕ್ಷಣಾ ಪತ್ರ ನೀಡುವಿಕೆಗೆ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳು ಲಂಚ ಪಡೆದಿದ್ದಾರೆ ಎಂದು ಇ.ಡಿ ದೂರು ದಾಖಲಿಸಿಕೊಂಡಿದೆ.

ಹೀಗಾಗಿ ಸೋಮವಾರ ಧರ್ಮಸೋತ್‌ರನ್ನು ಬಂಧಿಸಿದೆ. ಇದೇ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ನವೆಂಬರ್‌ನಲ್ಲಿ ಧರ್ಮಸೋತ್‌, ಕಾಂಗ್ರೆಸ್ ಶಾಸಕ ಸಂಗಟ್‌ ಸಿಂಗ್‌ ಗಿಲಿಜಿಯಾನ್‌ ಹಾಗೂ ಅರಣ್ಯ ಇಲಾಖೆಯ ಹಲವು ಅಧಿಕಾರಿಗಳ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.