ಮದ್ಯ ಹಗರಣ ಕೇಸಲ್ಲಿ ಆಪ್‌ ಪಕ್ಷವೂ ಆರೋಪಿ: ಇ.ಡಿ!

| Published : May 15 2024, 01:37 AM IST

ಸಾರಾಂಶ

ಸಿಸೊಡಿಯಾ ಬೇಲ್‌ ವಿಚಾರಣೆಯಲ್ಲಿ ಉಲ್ಲೇಖ ಮಾಡಿರುವ ಜಾರಿ ನಿರ್ದೇಶನಾಲಯ ಈ ಕುರಿತು ಸುಳಿವು ನೀಡಿದೆ.

ನವದೆಹಲಿ: ದೆಹಲಿ ಮದ್ಯ ಲೈಸೆನ್ಸ್‌ ಹಗರಣಕ್ಕೆ ಸಂಬಂಧಿಸಿದಂತೆ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್‌ಆದ್ಮಿ ಪಕ್ಷವನ್ನೂ ಸಹ ಆರೋಪಿಯನ್ನಾಗಿ ಮಾಡಲಾಗುವುದು ಎಂದು ಜಾರಿ ನಿರ್ದೇಶನಾಲಯ(ಇ.ಡಿ) ಕೋರ್ಟಗೆ ತಿಳಿಸಿದೆ.

ಇದೇ ಪ್ರಕರಣದಲ್ಲಿ ಬಂಧಿತ ದೆಹಲಿ ಡಿಸಿಎಂ ಮನೀಶ್‌ ಸಿಸೋಡಿಯಾ ಸಲ್ಲಿಸಿರುವ ಜಾಮೀನು ಅರ್ಜಿ ವಿರೋಧಿಸಿದ ವೇಳೆ ಇ.ಡಿ. ಈ ಮಾಹಿತಿ ನೀಡಿದೆ.

ಕಾನೂನಿನಲ್ಲಿ ಅವಕಾಶವಿದೆಯೇ?

ಪ್ರಕರಣವೊಂದರಲ್ಲಿ ರಾಜಕೀಯ ಪಕ್ಷವನ್ನು ಆರೋಪಿಯನ್ನಾಗಿ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಈ ಕುರಿತು ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿತ್ತು. ಜೊತೆಗೆ ದಿಲ್ಲಿ ಹೈಕೋರ್ಟ್‌ ನ್ಯಾಯಾಧೀಶರೂ ಸಹ ಅರವಿಂದ್‌ ಕೇಜ್ರಿವಾಲ್‌ ಬಿಡುಗಡೆ ತಿರಸ್ಕರಿಸುವ ವಿಚಾರಣೆ ನಡೆಸುವ ಸಮಯದಲ್ಲಿ ರಾಜಕೀಯ ಪಕ್ಷವನ್ನು ಕೂಡಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪ ಮಾಡಬಹುದು ಎಂದು ಹೇಳಿದ್ದರು.

ಜೊತೆಗೆ ರಾಜಕೀಯ ಪಕ್ಷವೊಂದನ್ನು ಆರೋಪಿ ಮಾಡಿದಲ್ಲಿ ಅದರ ವ್ಯವಹಾರವನ್ನು ನೋಡಿಕೊಳ್ಳುವ ಪಕ್ಷದ ಮುಖ್ಯ ಸಂಚಾಲಕರೇ ಹೊಣೆಗಾರರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಮೇಲೆ ಮತ್ತೊಂದು ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.