ಸಾರಾಂಶ
ಮುಂಬೈ: ವರ್ಷಾಂತ್ಯದ ವಿಧಾನಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತ ಆಗಿದ್ದ ಮಹಾರಾಷ್ಟ್ರ ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯೂತಿ ಮೈತ್ರಿಕೂಟ (ಬಿಜೆಪಿ-ಶಿಂಧೆ ಶಿವಸೇನೆ-ಎನ್ಸಿಪಿ ಅಜಿತ್), 11 ಸೀಟುಗಳ ಪೈಕಿ 9ರಲ್ಲಿ ಗೆದ್ದು ದಿಗ್ವಿಜಯ ಸಾಧಿಸಿವೆ. ಇದೇ ವೇಳೆ, ಇನ್ನು ಉಳಿದ 2 ಕ್ಷೇತ್ರಗಳಲ್ಲಿ ಮಹಾ ವಿಕಾಸ ಅಘಾಡಿ ಕೂಟ (ಎನ್ಸಿಪಿ ಶರದ್-ಕಾಂಗ್ರೆಸ್-ಠಾಕ್ರೆ ಶಿವಸೇನೆ) ಗೆದ್ದಿವೆ.
11 ಸೀಟುಗಳಿಗೆ 12 ಅಭ್ಯರ್ಥಿಗಳು ಕಣಕ್ಕಿಳಿಸಿದ್ದರು. ಹೀಗಾಗಿ ಅವಿರೋಧ ಆಯ್ಕೆ ನಡೆಯದೇ ಚುನಾವಣೆ ಏರ್ಪಟ್ಟಿತ್ತು. ಬಿಜೆಪಿ ತಾನು ಸ್ಪರ್ಧಿಸಿದ ಎಲ್ಲ 5, ಶಿಂಧೆ ಶಿವಸೇನೆಯ ಇಬ್ಬರು ಹಾಗೂ ಅಜಿತ್ ಎನ್ಸಿಪಿಯ ಇಬ್ಬರು ಗೆದ್ದಿದ್ದಾರೆ. ಅಘಾಡಿ 2 ಸೀಟಲ್ಲಿ ಗೆದ್ದಿದ್ದು, ಪವಾರ್ ಎನ್ಸಿಪಿಯ ಹಿರಿಯ ನಾಯಕ ಜಯಂತ ಪಾಟೀಲ್ ಸೋಲು ಕಂಡಿದ್ದಾರೆ.
7-8 ಕಾಂಗ್ರೆಸ್ ಶಾಸಕರ ಅಡ್ಡಮತ:
ಈ ನಡುವೆ, 7-8 ಕಾಂಗ್ರೆಸ್ ಶಾಸಕರು ಬಿಜೆಪಿ ಪರ ಅಡ್ಡಮತದಾನ ಮಾಡಿದ್ದು, ಇದು ಜಯಂತ ಪಾಟೀಲ್ ಸೋಲಿಗೆ ಕಾರಣ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ಅಘಾಡಿಗೆ ಇದು ಭಾರಿ ಹಿನ್ನಡೆ ಆಗಿದೆ.