ಸಾರಾಂಶ
ತಮಿಳುನಾಡಿನಲ್ಲಿ ರಾಮಮಂದಿರ ಉದ್ಘಾಟನೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕೆ ಸ್ಥಳೀಯ ಸರ್ಕಾರ ತಡೆಯೊಡ್ಡುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ. ಇದನ್ನು ತಮಿಳುನಾಡು ಸರ್ಕಾರ ಅಲ್ಲಗಳೆದಿದೆ.
ಚೆನ್ನೈ: ಜ.22 ರಂದು ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ತಮಿಳುನಾಡಿನ 200ಕ್ಕೂ ಹೆಚ್ಚು ಶ್ರೀರಾಮ ದೇಗುಲಗಳಲ್ಲಿ ಪೂಜೆ, ಅನ್ನದಾನವನ್ನು ರಾಜ್ಯ ಸರ್ಕಾರ ನಿಷೇಧಿಸಿದೆ.
ಖಾಸಗಿ ದೇವಸ್ಥಾನಗಳು ಆಯೋಜಿಸುವ ಕಾರ್ಯಕ್ರಮಗಳಿಗೂ ಪೊಲೀಸರು ತಡೆ ನೀಡುತ್ತಿದ್ದು ಪೆಂಡಲ್ ತೆರವುಗೊಳಿಸುವ ಬೆದರಿಕೆ ಒಡ್ಡುತ್ತಿದ್ದಾರೆ.
ಇದು ಹಿಂದೂ ವಿರೋಧಿಯಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಆರೋಪಿಸಿದ್ದಾರೆ.
ಪ್ರಾಣ ಪ್ರತಿಷ್ಠಾಪನೆಯ ಸಮಾರಂಭದ ನೇರ ಪ್ರಸಾರಕ್ಕೂ ತಮಿಳುನಾಡು ಸರ್ಕಾರ ತಡೆ ನೀಡಿದೆ ಎಂದು ನಿರ್ಮಲಾ ಅವರು ಸ್ಥಳೀಯ ಮಾಧ್ಯಮ ವರದಿಯೊಂದನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ನಿರ್ಮಲಾ ಅವರ ಈ ಆರೋಪವನ್ನು ರಾಜ್ಯದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವ ಶೇಖರ್ ಬಾಬು ಅಲ್ಲಗಳೆದಿದ್ದಾರೆ.