ಶಿವಾಜಿ ಪ್ರತಿಮೆ ಕುಸಿತ್ಕೆ ತುಕ್ಕು ಹಿಡಿದ ನಟ್‌, ಬೋಲ್ಟ್‌ ಕಾರಣ

| Published : Aug 28 2024, 12:45 AM IST

ಸಾರಾಂಶ

ಸಿಂಧುದುರ್ಗ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಮರಾಠಾ ರಾಜ ಛತ್ರಪತಿ ಶಿವಾಜಿ ಅವರ 35 ಅಡಿ ಎತ್ತರದ ಪ್ರತಿಮೆ ಕುಸಿಯಲು ತುಕ್ಕು ಹಿಡಿದ ನಟ್ ಮತ್ತು ಬೋಲ್ಟ್‌ಗಳೇ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ : ಸಿಂಧುದುರ್ಗ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಮರಾಠಾ ರಾಜ ಛತ್ರಪತಿ ಶಿವಾಜಿ ಅವರ 35 ಅಡಿ ಎತ್ತರದ ಪ್ರತಿಮೆ ಕುಸಿಯಲು ತುಕ್ಕು ಹಿಡಿದ ನಟ್ ಮತ್ತು ಬೋಲ್ಟ್‌ಗಳೇ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಗುತ್ತಿಗೆದಾರರು ಶಿವಾಜಿ ಪ್ರತಿಮೆಯನ್ನು ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ನಿರ್ಮಿಸಿದ್ದಾರೆ. ಪ್ರತಿಮೆ ತುಕ್ಕು ಹಿಡಿಯುತ್ತಿರುವ ಬಗ್ಗೆ ಪ್ರವಾಸಿಗರು, ಸಾರ್ವಜನಿಕರು ದೂರು ನೀಡಿದ್ದರು. ಈ ಹಿನ್ನೆಲೆ ನಟ್‌, ಬೋಲ್ಟ್‌ಗಳು ತುಕ್ಕು ಹಿಡಿಯುತ್ತಿರುವುದ ಬಗ್ಗೆ ನೌಕಾಪಡೆ ಅಧಿಕಾರಿಗಳಿಗೆ ಆ.20 ರಂದು ಪತ್ರ ಬರೆದಿದ್ದೆವು. ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಪಿಡಬ್ಲ್ಯುಡಿ ಇಲಾಖೆ ಗುತ್ತಿದಾರನ ಮೇಲೆ ದೂರು ನೀಡಿದ್ದು, ಪೊಲೀಸರು ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಸಿಎಂ ರಾಜೀನಾಮೆಗೆ ಆಗ್ರಹ: ಪ್ರತಿಮೆ ಕುಸಿತದ ಘಟನೆ ಹೊಣೆ ಹೊತ್ತು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಶಿವಸೇನಾ (ಯುಬಿಟಿ) ವಕ್ತಾರ ಸಂಜಯ ರಾವುತ್‌ ಒತ್ತಾಯಿಸಿದ್ದಾರೆ.

ದೊಡ್ಡ ಪ್ರತಿಮೆ ನಿರ್ಮಾಣ- ಫಡ್ನವೀಸ್‌: ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಮಾತನಾಡಿ, ’ಈಗಿನ ಶಿವಾಜಿ ನೌಕೆಯನ್ನು ನೌಕಾಪಡೆ ನಿರ್ಮಿಸಿತ್ತು. ಆದರೆ ಈ ಸಲ ಮಹಾರಾಷ್ಟ್ರ ಸರ್ಕಾರವೇ ಹಿಂದಿನದಕ್ಕಿಂತ ದೊಡ್ಡ ಪ್ರತಿಮೆ ನಿರ್ಮಿಸಲಿದೆ’ ಎಂದು ಘೋಷಿಸಿದ್ದಾರೆ.

==

ಕಾಶ್ಮೀರ: 29 ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಘೋಷಣೆ

ನವದೆಹಲಿ: ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ 29 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಇದಿಂದಾಗಿ ಈವರೆಗೆ 45 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ.ನಗ್ರೋಟಾ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ದೇವೆಂದರ್‌ ಸಿಂಗ್ ರಾಣಾ, 2014 ರಲ್ಲಿ ನಡೆದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಪ್ರತಿನಿಧಿಸಿದ್ದ ಬಿಲ್ಲವರ್‌ನಿಂದ ಸತೀಶ್ ಶರ್ಮಾ ಅವರನ್ನು ಪಕ್ಷ ಕಣಕ್ಕಿಳಿಸಿದೆ.

ರವೀಂದರ್ ರಾಣಾ 2014ರಲ್ಲಿ ಪ್ರತಿನಿಧಿಸಿದ್ದ ನೌಶೇರಾ ಮತ್ತು ಗಾಂಧಿನಗರಕ್ಕೆ ಬಿಜೆಪಿ ಇದುವರೆಗೆ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ.ಸೋಮವಾರ ಮೊದಲ ಹಂತದ 16 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿತ್ತು.

==

ಸೆ.2 ರಿಂದ ಬಿಜೆಪಿ ಸದಸ್ಯತ್ವ ಅಭಿಯಾನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸದಸ್ಯತ್ವ ನವೀಕರಿಸುವ ಮೂಲಕ ಸೆ.2 ರಿಂದ ಬಿಜೆಪಿ ತನ್ನ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಿದೆ.ಈ ಕುರಿತು ಸದಸ್ಯತ್ವ ಅಭಿಯಾನದ ಮುಖ್ಯಸ್ಥ ವಿನೋದ್ ತಾವ್ಡೆ ಮಾತನಾಡಿ, ಮೊದಲ ಹಂತದ ಸದಸ್ಯತ್ವ ಅಭಿಯಾನವು ಸೆ.2ರಿಂದ ಸೆ.25ರವರೆಗೆ ನಡೆಯಲಿದೆ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮೋದಿ ಅವರ ಸದಸ್ಯತ್ವವನ್ನು ಮೊದಲು ನವೀಕರಿಸಲಿದ್ದಾರೆ. ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಸಂಸದರಿಗೆ ಅಭಿಯಾನದ ನೇತೃತ್ವ ವಹಿಸಲಾಗುವುದು. ಅವರು ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿಲಿದ್ದಾರೆ ಎಂದರು.

ನಂತರ ಅ.1ರಿಂದ ಆ.15ರ ವರೆಗೆ ಎರಡನೇ ಹಂತಕ್ಕೆ ಚಾಲನೆ ನೀಡಲಾಗುತ್ತದೆ. ವಿಕಸಿತ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಬಿಜೆಪಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ತಾವ್ಡೆ ಮನವಿ ಮಾಡಿದರು.ಬಿಜೆಪಿಯ ಅಸ್ತಿತ್ವದಲ್ಲಿರುವ ಎಲ್ಲಾ ಸದಸ್ಯರು 6 ವರ್ಷಗಳಿಗೊಮ್ಮೆ ತಮ್ಮ ಸದಸ್ಯತ್ವವನ್ನು ನವೀಕರಿಸಬೇಕು.

==

ಆಮೆರಿಕದಲ್ಲಿ ವಿಮಾನದ ಟೈರ್‌ ಸ್ಫೋಟ: 2 ಸಿಬ್ಬಂದಿ ಸಾವು

ಅಟ್ಲಾಂಟ (ಅಮೆರಿಕ): ಡೆಲ್ಟಾ ಏರ್‌ಲೈನ್ಸ್‌ ಕಂಪನಿಗೆ ಸೇರಿದ್ದ ಬೋಯಿಂಗ್‌ 757 ವಿಮಾನದ ಟೈಯರ್‌ ಸ್ಫೋಟಗೊಂಡಿದ್ದು, ಇಬ್ಬರು ಸಿಬ್ಬಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ 5 ಗಂಟೆಗೆ ಅಮೆರಿಕದಲ್ಲಿ ಸಂಭವಿಸಿದೆ.ಅಮೆರಿಕದ ಅಟ್ಲಾಂಟ ವಿಮಾನ ನಿಲ್ದಾಣದಲ್ಲಿರುವ ಡೆಲ್ಟಾ ವಿಮಾನ ನಿರ್ವಹಣಾ ಕೇಂದ್ರದಲ್ಲಿ ದುರ್ಘಟನೆ ನಡೆದಿದೆ. ಗಾಯಗೊಂಡ ಕಾರ್ಮಿಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಮಿಕರ ನಿಧನಕ್ಕೆ ಡೆಲ್ಟಾ ಏರ್‌ಲೈನ್ಸ್‌ ಸಂತಾಪ ಸೂಚಿಸಿದ್ದು, ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಕ್ಸ್‌ನಲ್ಲಿ ತಿಳಿಸಿದೆ.