ಸಾರಾಂಶ
ವಯನಾಡ್ : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಚಿತ್ರಗಳನ್ನು ಹೊಂದಿದ್ದ ಹಾಗೂ ಹಂಚಿಕೆಗೆ ಸಿದ್ಧವಾಗಿದ್ದ ಸುಮಾರು 30 ಆಹಾರ ಪೊಟ್ಟಣಗಳನ್ನು ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ವಶಪಡಿಸಿಕೊಂಡಿದ್ದಾರೆ.
ಗುರುವಾರ ಜಿಲ್ಲೆಯ ತೊಲ್ಪೆಟ್ಟಿ ಎಂಬಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕನ ನಿವಾಸದ ಬಳಿಯ ಹಿಟ್ಟಿನ ಗಿರಣಿಯಿಂದ ಇವನ್ನು ವಶಪಡಿಸಿಕೊಳ್ಳಲಾಗಿದೆ. ವಯನಾಡ್ನಲ್ಲಿ ಕಾಂಗ್ರೆಸ್ಸಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದಾರೆ.
ಟೀ ಪುಡಿ, ಸಕ್ಕರೆ, ಅಕ್ಕಿ ಮತ್ತು ಇತರ ದಿನಸಿ ಪದಾರ್ಥಗಳನ್ನು ಹೊಂದಿದ್ದ ಆಹಾರ ಪೊಟ್ಟಣಗಳ ಮೇಲೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜೊತೆಗೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಚಿತ್ರವೂ ಇದ್ದವು ಎಂದು ಮೂಲಗಳು ಹೇಳಿವೆ.
ಕೇರಳದ ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್ಡಿಎಫ್), ‘ಆಹಾರ ಪೊಟ್ಟಣಗಳ ಹಂಚುವ ಕಾಂಗ್ರೆಸ್ ಯತ್ನ ಚುನಾವಣಾ ತಂತ್ರ’ ಎಂದು ಟೀಕಿಸಿದೆ. ಆದರೆ ಇದಕ್ಕೆ ಕಿಡಿಕಾರಿರುವ ಕಾಂಗ್ರೆಸ್, ಇವು ವಯನಾಡು ಭೂಕುಸಿತ ಸಂತ್ರಸ್ತರಿಗೆ ಹಂಚಲು ತಂದಿದ್ದ ಆಹಾರ ಪೊಟ್ಟಣಗಳು ಎಂದು ಹೇಳಿದೆ.
ನಾನು ವ್ಯಾಪಾರದ ವಿರೋಧಿ ಅಲ್ಲ: ರಾಹುಲ್ ಗಾಂಧಿ ಸ್ಪಷ್ಟನೆ
ನವದೆಹಲಿ: ಬಿಜೆಪಿಯವರು ಬಿಂಬಿಸುತ್ತಿರುವಂತೆ ತಾನು ವ್ಯಾಪಾರದ ವಿರೋಧಿ ಅಲ್ಲ, ಆದರೆ ಏಕಸ್ವಾಮ್ಯತೆ ವಿರೋಧಿಸುತ್ತೇನೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.ಇತ್ತೀಚೆಗೆ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗೆ ಲೇಖನ ಬರೆದಿದ್ದ ರಾಹುಲ್ ಗಾಂಧಿ, ‘150 ವರ್ಷಗಳ ಹಿಂದೆ ಆಳ್ವಿಕೆ ನಡೆಸಿದ್ದ ಈಸ್ಟ್ ಇಂಡಿಯಾ ಕಂಪನಿ, ಏಕಸ್ವಾಮ್ಯತೆಯ ಮೂಲಕ ಮತ್ತೆ ಭಾರತಕ್ಕೆ ಮರಳುವ ಲಕ್ಷಣಗಳು ಕಾಣಿಸುತ್ತಿವೆ’ ಎಂದಿದ್ದರು.
ಜೊತೆಗೆ, ಇತ್ತೀಚೆಗೆ ಉದ್ಯಮಿಗಳಾದ ಗೌತಮ್ ಅದಾನಿ ಹಾಗೂ ಮುಕೇಶ್ ಅಂಬಾನಿ ಪ್ರತಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಧೋರಣೆಯನ್ನು ಟೀಕಿಸುತ್ತಿದ್ದರು. ಈ ಕಾರಣಗಳಿಂದ ರಾಹುಲ್ ವ್ಯಾಪಾರ ವಿರೋಧಿ ನಿಲುವು ಹೊಂದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿತ್ತು.ಇದಕ್ಕೆ ಸ್ಪಷ್ಟನೆ ನೀಡಿರುವ ರಾಹುಲ್, ‘ಬಿಜೆಪಿ ಬಿಂಬಿಸುತ್ತಿರುವಂತೆ ನಾನು ವ್ಯಾಪಾರ ವಿರೋಧಿಯಲ್ಲ. ಆದರೆ ಉದ್ಯಮಗಳ ಮೇಲೆ ಕೆಲ ಜನರ ಪ್ರಾಬಲ್ಯವನ್ನು ವಿರೋಧಿಸುತ್ತೇನೆ. ನಾನು ಉದ್ಯೋಗ, ವ್ಯಾಪಾರ, ಅನ್ವೇಷಣೆ, ಸ್ಪರ್ಧೆಯನ್ನು ಬೆಂಬಲಿಸುತ್ತೇನೆ’ ಎಂದರು.