ಸಾರಾಂಶ
ನವದೆಹಲಿ: ನೆರೆರಾಷ್ಟ್ರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಹಾಗೂ ಹಿಂದೂಗಳ ಮೇಲಿನ ದಾಳಿಗಳು ಹೆಚ್ಚುತ್ತಿರುವ ನಡುವೆಯೇ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಸೋಮವಾರ ಢಾಕಾಗೆ 1 ದಿನ ಪ್ರವಾಸ ಕೈಗೊಳ್ಳಲಿದ್ದಾರೆ.
ಇದು ಹಸೀನಾ ನಿರ್ಗಮನದ ಬಳಿಕ ಭಾರತದ ರಾಜತಾಂತ್ರಿಕರು ಬಾಂಗ್ಲಾಗೆ ಕೈಗೊಳ್ಳುತ್ತಿರುವ ಮೊದಲ ಭೇಟಿಯಾಗಿದ್ದು, ಮಹತ್ವ ಪಡೆದುಕೊಂಡಿದೆ. ಭೇಟಿ ವೇಳೆ ಅವರು ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಮೊಹಮ್ಮದ್ ಜಶಿಮ್ ಉದ್ದಿನ್ ಹಾಗೂ ವಿದೇಶಾಂಗ ಸಚಿವ ಮೊಹಮ್ಮದ್ ತೌಶಿದ್ ಹೌಸೇನ್ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಮಿಸ್ರಿ ಅವರು ಅಲ್ಲಿನ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ರನ್ನೂ ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ವೇಳೆ ಬಾಂಗ್ಲಾ ಅಲ್ಪಸಂಖ್ಯಾತರು, ವಿಶೇಷವಾಗಿ ಹಿಂದೂಗಳ ಮೇಲಿನ ದಾಳಿಗಳ ಬಗೆಗಿನ ಭಾರತದ ಕಳವಳವನ್ನು ಮಿಸ್ರಿ ವ್ಯಕ್ತಪಡಿಸುವ ನಿರೀಕ್ಷೆಯಿದ್ದು, ಅತ್ತ ಬಾಂಗ್ಲಾ ಕೂಡ ಭಾರತದಲ್ಲಿ ಆಶ್ರಯ ಪಡೆಯುತ್ತಿರುವ ಶೇಖ್ ಹಸೀನಾರ ಹಸ್ತಾಂತರಕ್ಕೆ ಆಗ್ರಹಿಸುವ ಸಾಧ್ಯತೆ ಇದೆ.
ಭಾರತ ಪರ ಪ್ರಧಾನಿ ಎಂದು ಗುರುತಿಸಿಕೊಂಡಿದ್ದ ಹಸೀನಾ ಅಧಿಕಾರ ಕಳೆದುಕೊಂಡ ಬಳಿಕ ಅಲ್ಲಿನ ಹಿಂದೂಗಳು ಹಾಗೂ ದೇವಸ್ಥಾನಗಳ ಮೇಲಿನ ದಾಳಿಗಳು ಹೆಚ್ಚಿದ್ದು, ಇತ್ತೀಚೆಗೆ ಇಸ್ಕಾನ್ ಸನ್ಯಾಸಿಯ್ನನೂ ದೇಶದ್ರೋಹಿಯೆಂದು ಬಂಧಿಸಲಾಗಿತ್ತು.