ಲೋಕಸಭೆಯ ಸದಸ್ಯನಾಗಿ ಆಯ್ಕೆಯಾದ ಖಲಿಸ್ತಾನಿ ಉಗ್ರ ಅಮೃತ್‌ಪಾಲ್ ಸಿಂಗ್ ಪರ ಚನ್ನಿ ಹೇಳಿಕೆ: ವಿವಾದ

| Published : Jul 26 2024, 01:36 AM IST / Updated: Jul 26 2024, 04:51 AM IST

ಸಾರಾಂಶ

ಇತ್ತೀಚೆಗೆ ಲೋಕಸಭೆಯ ಸದಸ್ಯನಾಗಿ ಆಯ್ಕೆಯಾದ ಖಲಿಸ್ತಾನಿ ಉಗ್ರ ಅಮೃತ್‌ಪಾಲ್ ಸಿಂಗ್ ಪರ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಸಂಸದ ಚರಂಜಿತ್ ಸಿಂಗ್ ಚನ್ನಿ ಗುರುವಾರ ನೀಡಿದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ.

ನವದೆಹಲಿ: ಇತ್ತೀಚೆಗೆ ಲೋಕಸಭೆಯ ಸದಸ್ಯನಾಗಿ ಆಯ್ಕೆಯಾದ ಖಲಿಸ್ತಾನಿ ಉಗ್ರ ಅಮೃತ್‌ಪಾಲ್ ಸಿಂಗ್ ಪರ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಸಂಸದ ಚರಂಜಿತ್ ಸಿಂಗ್ ಚನ್ನಿ ಗುರುವಾರ ನೀಡಿದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ.

‘20 ಲಕ್ಷ ಮತದಾರರ ಬೆಂಬಲದೊಂದಿಗೆ ಲೋಕಸಭೆಯ ಸದಸ್ಯನಾಗಿರುವ ಅಮೃತ್‌ಪಾಲ್‌ ಸಿಂಗ್‌ರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿ ಜೈಲಿನಲ್ಲಿ ಇಡುವ ಮೂಲಕ ಆವರ ವಾಕ್‌ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ’ ಎಂದು ಚನ್ನಿ ಲೋಕಸಭೆಯಲ್ಲಿ ಹೇಳಿದ್ದಾರೆ.

ಮೃತ ಖಲಿಸ್ತಾನಿ ಉಗ್ರ ಭಿಂದ್ರನ್‌ವಾಲೆ ರೀತಿ ಉಡುಗೆ-ತೊಡುಗೆಯನ್ನು ಅಳವಡಿಸಿಕೊಂಡು ‘ವಾರಿಸ್ ಪಂಜಾಬ್ ದಿ’ ಸಂಘಟನೆಯ ಮುಖ್ಯಸ್ಥನಾಗಿರುವ ಅಮೃತ್‌ಪಾಲ್‌ ಸಿಂಗ್‌ ಮತ್ತು ಆತನ ಬೆಂಬಲಿಗರು, ಕಳೆದ ವರ್ಷ ಪಂಜಾಬ್‌ನ ಅಜ್ನಾಲಾ ಪೊಲೀಸ್ ಠಾಣೆ ಬಳಿ ಖಡ್ಗ ಮತ್ತು ಬಂದೂಕು ಹಿಡಿದು ಅರಾಜಕತೆ ಸೃಷ್ಟಿಸಿದ್ದರು. ಈ ಸಂಬಂಧ ಸಿಂಗ್ ಮತ್ತು ಆತನ 9 ಸಹಚರರನ್ನು ಜೈಲಿಗಟ್ಟಲಾಗಿತ್ತು. ಬಳಿಕ ಇತ್ತೀಚೆಗೆ ಆತ ಜೈಲಿಂದಲೇ ಸ್ಪರ್ಧಿಸಿ ಗೆದ್ದಿದ್ದಾನೆ.

ಕಳೆದ ತಿಂಗಳು ಲೋಕಸಭಾ ಸದಸ್ಯನಾಗಿ ಪ್ರಮಾಣ ಸ್ವೀಕರಿಸಲು ಸಿಂಗ್ ನಾಲ್ಕು ದಿನಗಳ ಪರೋಲ್ ಪಡೆದು ಹೊರಬಂದಿದ್ದ.