ಸಾರಾಂಶ
ಜಾರ್ಜ್ರ್ಟನ್(ಗಯಾನಾ): ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಯಾನಾ, ಡೊಮಿನಿಕಾ ಹಾಗೂ ಬಾರ್ಬೆಡಾಸ್ ರಾಷ್ಟ್ರಗಳು ತಮ್ಮ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ಕೊರೋನಾ ಸಮಯದಲ್ಲಿ ಲಸಿಕೆ ಪೂರೈಸಿ ನೆರವಾಗಿದ್ದ ಕಾರಣ ದಕ್ಷಿಣ ಅಮೆರಿಕಾದ ಗಯಾನಾ ಹಾಗೂ ಕೆರೆಬಿಯನ್ ದೇಶವಾದ ಡೊಮಿನಿಕಾ ಈ ಗೌರವ ಘೋಷಿಸಿವೆ.
ಗಯಾನಾದ ‘ದಿ ಆರ್ಡರ್ ಆಫ್ ಎಕ್ಸಲೆನ್ಸ್’, ಡೊಮಿನಿಕಾದ ‘ಅವಾರ್ಡ್ ಆಫ್ ಆನರ್’ ಹಾಗೂ ಬಾರ್ಬೆಡಾಸ್ನ ಅತ್ಯುಚ್ಚ ಪ್ರಶಸ್ತಿಯಾದ ‘ಆನರಿ ಆರ್ಡರ್ ಆಫ್ ಫ್ರೀಡಂ ಆಫ್ ಬಾರ್ಬೆಡಾಸ್’ ಮೋದಿಯವರಿಗೆ ಲಭಿಸಿವೆ.
ಇದು ಯುದ್ಧದ ಸಮಯವಲ್ಲ: ಮೋದಿ
ಜಾರ್ಜ್ಟೌನ್: ಉಕ್ರೇನ್- ರಷ್ಯಾ ಸಂಘರ್ಷ ತಾರಕಕ್ಕೆ ಏರಿರುವ ಹೊತ್ತಿನಲ್ಲೇ ಮತ್ತೆ ಶಾಂತಿ ಮಂತ್ರ ಜಪಿಸಿರುವ ಪ್ರಧಾನಿ ಮೋದಿ, ಇದು ಯುದ್ಧದ ಸಮಯವಲ್ಲ ಎಂದು ಮತ್ತೆ ಸಾರಿ ಹೇಳಿದ್ದಾರೆ. ಗುರುವಾರ ಗಯಾನ ಸಂಸತ್ತಿನ ವಿಶೇ಼ಷ ಅಧಿವೇಶನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಇಂದು ಸಂಘರ್ಷದ ಸಮಯವಲ್ಲ; ಇದು ಸಂಘರ್ಷಗಳನ್ನು ಸೃಷ್ಟಿಸುವ ಷರತ್ತುಗಳನ್ನು ಗುರುತಿಸುವ ಮತ್ತು ಅದನ್ನು ತೆಗೆದು ಹಾಕುವ ಸಮಯ.
ಜಗತ್ತಿನಲ್ಲಿ ಯಾವುದೇ ಬಿಕ್ಕಟ್ಟು ಉಂಟಾದರೂ ನೆರವು ನೀಡುವಲ್ಲಿ ಭಾರತ ಮೊದಲಿರುತ್ತದೆ’ ಎಂದು ಹೇಳಿದ್ದಾರೆ. ಜೊತೆಗೆ ಬಾಹ್ಯಾಕಾಶ ಮತ್ತು ಸಾಗರದಲ್ಲಿ ಸಹಕಾರವಿರಬೇಕೇ ಹೊರತು ಸಂಘರ್ಷವಲ್ಲ. ಭಾರತ ಎಂದೂ ಸ್ವಾರ್ಥ, ವಿಸ್ತರಣಾ ನೀತಿಯನ್ನು ಅನುಸರಿಸಿಲ್ಲ. ಜಗತ್ತು ಮುಂದುವರೆಯಬೇಕಾದರೆ ‘ಪ್ರಜಾಪ್ರಭುತ್ವ ಮೊದಲು, ಮಾನವೀಯತೆ ಮೊದಲು’ ಎಂಬ ಮಂತ್ರ ಅಗತ್ಯ’ ಎಂದರು.