ಸಾರಾಂಶ
ಚಂಡೀಗಢ: ಕಾಂಗ್ರೆಸ್ ಅತಿದೊಡ್ಡ ದಲಿತ ವಿರೋಧಿ ಪಕ್ಷ ಎಂದು ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ, ದೇಶವ್ಯಾಪಿ ಮೀಸಲು ರದ್ದು ಮಾಡಲು ಕಾಂಗ್ರೆಸ್ ಹುನ್ನಾರ ನಡೆಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ಇಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ಮೋದಿ, ‘ಮತಕ್ಕಾಗಿ ಕಾಂಗ್ರೆಸ್ ಜನರ ಧ್ರುವೀಕರಣ ಮಾಡುತ್ತಿದೆ. ಅವರು ದಲಿತರು ಮತ್ತು ಹಿಂದುಳಿದವರ ಮೀಸಲು ರದ್ದು ಮಾಡಲಿದ್ದಾರೆ. ಈ ಹಿಂದೆ ಕರ್ನಾಟಕದಲ್ಲೂ ಅದನ್ನೇ ಮಾಡಿದ್ದರು. ಅಲ್ಲಿ ಅವರು ದಲಿತರ ಮೀಸಲು ಕಸಿದು ತಮ್ಮ ವೋಟ್ಬ್ಯಾಂಕ್ಗೆ ಮೀಸಲು ನೀಡಿದರು. ಅದನ್ನೇ ದೇಶವ್ಯಾಪಿ ಮಾಡಲು ಅವರು ಹರ್ಯಾಣವನ್ನು ತಮ್ಮ ಪರೀಕ್ಷಾ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಮೋದಿ ಮತ್ತು ಬಿಜೆಪಿ ಇರುವವರೆಗೂ ಮೀಸಲಾತಿ ರದ್ದು ಪಡಿಸಲು ಸಾಧ್ಯವಿಲ್ಲ’ಎಂದು ಗುಡುಗಿದರು.
ಅಂಬಾನಿ ಮದುವೆಯಲ್ಲಿ ಖರ್ಚಾಗಿದ್ದು ಯಾರ ಹಣ?: ರಾಗಾ ಪ್ರಶ್ನೆ
ಚಂಡೀಗಢ: ಉದ್ಯಮಿಗಳಾದ ಅಂಬಾನಿ, ಅದಾನಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ರಾಹುಲ್ ಗಾಂಧೀ, ಇದೀಗ ಇತ್ತೀಚೆಗೆ ನಡೆದ ಮುಕೇಶ್ ಅಂಬಾನಿ ಪುತ್ರನ ವೈಭವೋಪೇತ ಮದುವೆ ವಿಷಯ ಪ್ರಸ್ತಾಪಿಸಿದ್ದಾರೆ. ಹರ್ಯಾಣ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್, ‘ಬಡವರು ತಮ್ಮ ಮಕ್ಕಳ ಮದುವೆ ಮಾಡಿ ಸಾಲಗಾರರಾಗುತ್ತಾರೆ. ಆದರೆ ಅಂಬಾನಿ ತಮ್ಮ ಮಕ್ಕಳ ಮದುವೆಯನ್ನು ಕೋಟ್ಯಂತರ ರು. ವೆಚ್ಚ ಮಾಡಿ ಮಾಡುತ್ತಾರೆ. ಇದೆಲ್ಲಾ ಯಾರ ಹಣ. ಇದೆಲ್ಲಾ ನಿಮ್ಮ ಹಣ. ಕೆಲವರಿಗಷ್ಟೇ ಸಾವಿರಾರು ಕೋಟಿ ಖರ್ಚಲ್ಲಿ ಅದ್ದೂರಿ ಮದುವೆ ನಡೆಸಲು ಅನುಕೂಲವಾಗುವಂತೆ ಪ್ರಧಾನಿ ನರೇಂದ್ರ ಮೋದಿ ವ್ಯವಸ್ಥೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.