ಅಮೆರಿಕದಲ್ಲಿ ನೆಲೆಸಿದ್ದ ಭಾರತ ಮೂಲದ ವ್ಯಕ್ತಿಯೊಬ್ಬ ಪತ್ನಿಯೊಡನೆ ಜಗಳವಾಡಿ ಸಿಟ್ಟಿಗೆದ್ದು, ಮಕ್ಕಳ ಕಣ್ಣೆದುರಲ್ಲೇ ಪತ್ನಿ ಹಾಗೂ ಆಕೆಯ ಮೂವರು ಸಂಬಂಧಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಭೀಕರ ಘಟನೆ ಜಾರ್ಜಿಯಾದ ಲಾರೆನ್ಸ್‌ವಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

ಬಚ್ಚಲಮನೆ ಸೇರಿ ಜೀವ ಉಳಿಸಿಕೊಂಡ ಮಕ್ಕಳುಜಾರ್ಜಿಯಾ: ಅಮೆರಿಕದಲ್ಲಿ ನೆಲೆಸಿದ್ದ ಭಾರತ ಮೂಲದ ವ್ಯಕ್ತಿಯೊಬ್ಬ ಪತ್ನಿಯೊಡನೆ ಜಗಳವಾಡಿ ಸಿಟ್ಟಿಗೆದ್ದು, ಮಕ್ಕಳ ಕಣ್ಣೆದುರಲ್ಲೇ ಪತ್ನಿ ಹಾಗೂ ಆಕೆಯ ಮೂವರು ಸಂಬಂಧಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಭೀಕರ ಘಟನೆ ಜಾರ್ಜಿಯಾದ ಲಾರೆನ್ಸ್‌ವಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

ಮೀನೂ ಡೋಗ್ರಾ (43), ಗೌರವ್‌ ಕುಮಾರ್ (33), ನಿಧಿ ಚಂದರ್ (37) ಹಾಗೂ ಹರೀಶ್‌ ಚಂದರ್‌ (38) ಮೃತ ದುರ್ದೈವಿಗಳು. ಆರೋಪಿ ಪತಿ ವಿಜಯ್‌ ಕುಮಾರ್‌ನನ್ನು (51) ಪೊಲೀಸರು ಬಂಧಿಸಿದ್ದಾರೆ.ಆಗಿದ್ದೇನು?: ಮೀನೂ ದಂಪತಿ ತಮ್ಮ 12 ವರ್ಷದ ಮಗುವಿನ ಜೊತೆ ಲಾರೆನ್ಸ್‌ವಿಲ್ಲೆಯ ಸಂಬಂಧಿಕರ ಮನೆಗೆ ತೆರಳಿದ್ದರು. ಆಗ ಗಂಡ ಹೆಂಡತಿ ನಡುವೆ ಜಗಳ ಶುರುವಾಗಿದೆ. ಕೂಡಲೇ ಪತ್ನಿ ಹಾಗೂ ಇತರರನ್ನು ವಿಜಯ್‌ ಕುಮಾರ್‌ ಗುಂಡಿಕ್ಕಿ ಹತ್ಯೆಗೆ ಮುಂದಾಗಿದ್ದಾನೆ. ವಿಜಯ್‌ನ ಮಗು ಹಾಗೂ ಸಂಬಂಧಿಕರ ಇಬ್ಬರು ಮಕ್ಕಳು ಬಚ್ಚಲಮನೆಯಲ್ಲಿ ಅಡಗಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಮಗು ಸಮಯಪ್ರಜ್ಞೆ ತೋರಿ 911ಕ್ಕೆ ಕರೆ ಮಾಡಿದ್ದರಿಂದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ.

==

ಅಮೆರಿಕದಲ್ಲಿ ಕಡೆಗೂ ಟಿಕ್‌ಟಾಕ್‌ ನಿಷೇಧ ರದ್ದು: ಹೊಸ ಒಪ್ಪಂದ

ವಾಷಿಂಗ್ಟನ್‌: ಕಳೆದ 1 ವರ್ಷದಿಂದ ಅಮೆರಿಕದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಚೀನಾ ಮೂಲದ ಜನಪ್ರಿಯ ಆನ್‌ಲೈನ್‌ ವೇದಿಕೆ ಟಿಕ್‌ಟಾಕ್‌ ಮರಳಿ ಸೇವೆ ಒದಗಿಸಲು ಮುಂದಾಗಿದೆ. ಸೇವೆ ಪುನಾರಂಭ ಸಂಬಂಧ ಅಮೆರಿಕ ಒಡ್ಡಿದ್ದ ಷರತ್ತುಗಳಿಗೆ ಟಿಕ್‌ಟಾಕ್‌ನ ಮಾತೃಸಂಸ್ಥೆ ಬೈಟ್‌ಡ್ಯಾನ್ಸ್‌ ಒಪ್ಪಿದ ಕಾರಣ ಶೀಘ್ರವೇ ಅದು ಹೊಸ ಆ್ಯಪ್‌ ಮೂಲಕ ಸೇವೆ ಪುನಾರಂಭಿಸಲು ಸಜ್ಜಾಗಿದೆ.ಈ ಒಪ್ಪಂದದ ಅನ್ವಯ, ಬೈಟ್‌ಡ್ಯಾನ್ಸ್‌ ಅಮೆರಿಕದಲ್ಲಿ ಹೊಸ ಕಂಪನಿಯಾಗಿ ಅಸ್ತಿತ್ವಕ್ಕೆ ಬರಲಿದೆ. ‘ಟಿಕ್‌ಟಾಕ್ ಯುಎಸ್‌ಡಿಎಸ್ ಜಾಯಿಂಟ್ ವೆಂಚರ್ ಎಲ್‌ಎಲ್‌’ ಹೆಸರಿನ ಹೊಸ ಉದ್ಯಮದಲ್ಲಿ ಶೇ.80ಕ್ಕಿಂತ ಹೆಚ್ಚು ಹೂಡಿಕೆಯ ಪಾಲನ್ನು ಅಮೆರಿಕ ಮೂಲದ ಒರಾಕಲ್‌, ಎಂಜಿಎಕ್ಸ್‌, ಸಿಲ್ವರ್ ಲೇಕ್‌ ಕಂಪನಿಗಳು ಹೊಂದಿರಲಿವೆ. ಶೇ.19.9ರಷ್ಟು ಪಾಲು ಬೈಟ್‌ಡ್ಯಾನ್ಸ್‌ಗಿರಲಿದೆ. ಕಂಪನಿಯ ಆಡಳಿತ ಮಂಡಳಿಯಲ್ಲಿ ಅಮೆರಿಕದ 7 ಮಂದಿ ನಿರ್ದೇಶಕರಿರಲಿದ್ದಾರೆ.

20 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದ್ದ ಟಿಕ್‌ಟಾಕ್‌ನ್ನು 2020ರಲ್ಲಿ ಅಮೆರಿಕ ಸರ್ಕಾರ ತನ್ನ ದೇಶದಲ್ಲಿ ಭಧ್ರತಾ ಕಾರಣಗಳೀಗಾಗಿ ನಿಷೇಧಿಸಿತ್ತು.

==

ಉಜ್ಜಯಿನಿಯಲ್ಲಿ ವಿಎಚ್ಪಿ ಮುಖಂಡನ ಮೇಲೆ ಹಲ್ಲೆ: ಹಿಂಸೆ, ಉದ್ವಿಗ್ನ ಪರಿಸ್ಥಿತಿ

2 ಕೋಮುಗಳ ನಡುವೆ ಮಾರಾಮಾರಿ

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ತರಾನಾ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್‌ನ ಯುವ ಮುಖಂಡರೊಬ್ಬರ ಮೇಲೆ ಹಲ್ಲೆ ನಡೆದ ಬೆನ್ನಲ್ಲೇ ತೀವ್ರ ಕೋಮು ಹಿಂಸಾಚಾರ ಸಂಭವಿಸಿದೆ. 2 ದಿನಗಳ ಕಾಲ ನಗರದಲ್ಲಿ ವ್ಯಾಪಕ ವಿಧ್ವಂಸಕ ಕೃತ್ಯಗಳು ನಡೆದಿದ್ದು, ವಾಹನಗಳು ಮತ್ತು ಮನೆಗಳ ಮೇಲೆ ಕಲ್ಲುತೂರಾಟ ವರದಿಯಾಗಿದೆ. ಉಜ್ಜಯಿನಿಯು ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಮೋಹನ್ ಯಾದವ್ ಅವರ ತವರು ಜಿಲ್ಲೆಯಾಗಿರುವುದರಿಂದ ಈ ಘಟನೆ ಹೆಚ್ಚು ಸೂಕ್ಷ್ಮತೆ ಪಡೆದುಕೊಂಡಿದೆ.ಗುರುವಾರ ರಾತ್ರಿ ವಿಎಚ್‌ಪಿ ಮುಖಂಡ ಸೋಹಲ್‌ ಠಾಕೂರ್ ಬುಂದೇಲಾ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿತ್ತು. ಅಲ್ಲಿಂದ 2 ಗುಂಪುಗಳ ನಡುವೆ ಸಂಘರ್ಷ ಆರಂಭವಾಗಿದೆ. ಕಿಡಿಗೇಡಿಗಳು ರಸ್ತೆಗಳಿದು ಕಲ್ಲುತೂರಾಟ ನಡೆಸಿ ಮೂಲಸೌಕರ್ಯಗಳ ಧ್ವಂಸದಲ್ಲಿ ತೊಡಗಿದ್ದಾರೆ. ಬಸ್‌ ಸ್ಟಾಂಡ್‌ನಲ್ಲಿದ್ದ ಕನಿಷ್ಠ 13 ಬಸ್‌ಗಳು ಮತ್ತು ಹಲವು ಬೈಕ್‌ಗಳಿಗೆ ಹಾನಿ ಮಾಡಿದ್ದಾರೆ. ನಂತರ ಪೊಲೀಸರು ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಶುಕ್ರವಾರ ಪ್ರಾರ್ಥನೆ ಬಳಿಕ ಮತ್ತೆ ಸಂಘರ್ಷ ಗರಿಗೆದರಿದೆ. ಶಸ್ತ್ರಸಜ್ಜಿತರಾಗಿ ಬಂದ ಎರಡೂ ಬಣಗಳವರು ಪರಸ್ಪರರ ಮೇಲೆ ದಾಳಿ ನಡೆಸಿದ್ದಾರೆ. ಮನೆಗಳು, ಅಂಗಡಿಗಳು ಮತ್ತು ವಾಹನಗಳಿಗೂ ಹಾನಿ ಮಾಡಿದ್ದಾರೆ. ಈ ನಡುವೆ, ಠಾಕೂರ್‌ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಬಂಧಿತರನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡಬೇಕೆಂದು ಆಗ್ರಹಿಸಿ ಠಾಕೂರ್‌ ಪರ ಗುಂಪು ತರಾನಾ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದೆ.