ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಐ ಲವ್‌ ಮೊಹಮ್ಮದ್‌ ವಿವಾದ, ಇದೀಗ ಈ ಆಂದೋಲನದ ಮೂಲ ಸ್ಥಳವಾದ ಉತ್ತರ ಪ್ರದೇಶದ ಬರೇಲಿಯಲ್ಲಿ ಸ್ಥಳೀಯರು ಮತ್ತು ಪೊಲೀಸರ ನಡುವೆ ಪುನಃ ಸಂಘರ್ಷಕ್ಕೆ ಕಾರಣವಾಗಿದೆ. 

 ಬರೇಲಿ : ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಐ ಲವ್‌ ಮೊಹಮ್ಮದ್‌ ವಿವಾದ, ಇದೀಗ ಈ ಆಂದೋಲನದ ಮೂಲ ಸ್ಥಳವಾದ ಉತ್ತರ ಪ್ರದೇಶದ ಬರೇಲಿಯಲ್ಲಿ ಸ್ಥಳೀಯರು ಮತ್ತು ಪೊಲೀಸರ ನಡುವೆ ಪುನಃ ಸಂಘರ್ಷಕ್ಕೆ ಕಾರಣವಾಗಿದೆ. ಐ ಲವ್‌ ಮೊಹಮ್ಮದ್‌ ಆಂದೋಲನಕ್ಕೆ ಸ್ಥಳೀಯ ಆಡಳಿತ ಅನುಮತಿ ನಿರಾಕರಿಸಿದ್ದರಿಂದ ಆಕ್ರೋಶಿತಗೊಂಡ ಗುಂಪು ಮಸೀದಿಯ ಮುಂಭಾಗ ಕಲ್ಲು ತೂರಾಟ ನಡೆಸಿದ ಘಟನೆ ಶುಕ್ರವಾರ ನಡೆದಿದೆ. 

ಸ್ಥಳೀಯ ಧಾರ್ಮಿಕ ನಾಯಕ ತೌಕೀರ್‌ ರಜಾ ಅವರ ಕರೆಯ ಮೇರೆಗೆ ‘ಐ ಲವ್‌ ಮೊಹಮ್ಮದ್‌’ ಆಂದೋಲನ ನಡೆಸಲು ಜನರು ಮಸೀದಿಯ ಹೊರಗೆ ಜಮಾಯಿಸಿದ್ದರು. ಆದರೆ, ಸ್ಥಳೀಯ ಆಡಳಿಯ ಅನುಮತಿ ನೀಡದ ಕಾರಣ ಪ್ರತಿಭಟನೆಯನ್ನು ರದ್ದುಗೊಳಿಸಲಾಯಿತು. ಇದರಿಂದ ಕೋಪಗೊಂಡ ಜನ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದರು. ಕೆಲವರು ಕಲ್ಲು ತೂರಾಟ ನಡೆಸಿದರು. ಬಳಿಕ ಪೊಲೀಸರು ಲಾಠಿ ಚಾರ್ಜ್‌ ನಡೆಸಿ ಗುಂಪನ್ನು ಚದುರಿಸಿದರು.

 ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೆ.4ರಂದು ಕಾನ್ಪುರದಲ್ಲಿ ನಡೆದ ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಕೆಲವರು ‘ಐ ಲವ್‌ ಮೊಹಮ್ಮದ್‌’ ಎಂದು ಬರೆದ ಫಲಕಗಳನ್ನು ಪ್ರದರ್ಶಿಸಿದ್ದರು. ಇದು ಕೋಮು ಸಾಮರಸ್ಯಕ್ಕೆ ಧಕ್ಕೆ ತರುತ್ತದೆ ಎಂದು ಹಿಂದೂಗಳು ಆರೋಪಿಸಿದ್ದರು. ನಂತರ ‘ಐ ಲವ್ ಮಹಾದೇವ್‌’ ಆಂದೋಲನ ಆರಂಭವಾಗಿತ್ತು. ಅದೀಗ ಹಲವು ರಾಜ್ಯಗಳಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ.