ದುಬೈ ಏರ್‌ಶೋನಲ್ಲಿ ತೇಜಸ್ ಪತನ, ಪೈಲಟ್ ದುರ್ಮರಣ

| N/A | Published : Nov 22 2025, 02:00 AM IST

Tejas

ಸಾರಾಂಶ

ಶುಕ್ರವಾರ ವಿಶ್ವದ ಪ್ರತಿಷ್ಠಿತ ದುಬೈ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿದ್ದ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿ. (ಎಚ್‌ಎಎಲ್) ನಿರ್ಮಿತ ಭಾರತೀಯ ವಾಯುಪಡೆಯ ತೇಜಸ್‌ ಯುದ್ಧವಿಮಾನ, ಪ್ರದರ್ಶನ ನೀಡುತ್ತಿದ್ದ ವೇಳೆ ಪತನವಾಗಿದೆ. ದುರಂತದಲ್ಲಿ ಪೈಲಟ್‌ ಮೃತಪಟ್ಟಿದ್ದಾರೆ.

 ನವದೆಹಲಿ/ದುಬೈ :  ಶುಕ್ರವಾರ ವಿಶ್ವದ ಪ್ರತಿಷ್ಠಿತ ದುಬೈ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿದ್ದ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿ. (ಎಚ್‌ಎಎಲ್) ನಿರ್ಮಿತ ಭಾರತೀಯ ವಾಯುಪಡೆಯ ತೇಜಸ್‌ ಯುದ್ಧವಿಮಾನ, ಪ್ರದರ್ಶನ ನೀಡುತ್ತಿದ್ದ ವೇಳೆ ಪತನವಾಗಿದೆ. ದುರಂತದಲ್ಲಿ ಪೈಲಟ್‌ ಮೃತಪಟ್ಟಿದ್ದಾರೆ.

ವಿಂಗ್ ಕಮಾಂಡರ್ ನಮನ್ ಸಯಾಲ್‌. ಮೃತ ಪೈಲಟ್‌. ಇವರು ಹಿಮಾಚಲ ಪ್ರದೇಶದ ಕಾಂಗ್ರಾದವರು.

ಈ ಘಟನೆಯು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತಕ್ಕೆ ಕೊಂಚ ಮುಜುಗರ ತಂದಿದೆ. ಇದರ ಬೆನ್ನಲ್ಲೇ ವಾಯುಪಡೆ ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದೆ.ಜಗತ್ತಿನ ಅತಿದೊಡ್ಡ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾದ ದುಬೈ ಏರ್‌ ಶೋ ಅಲ್ ಮಕ್ತುಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಡೆಯುತ್ತಿತ್ತು. ಶುಕ್ರವಾರ ಮಧ್ಯಾಹ್ನ ಸ್ಥಳೀಯ ಕಾಲಮಾನ 2:10ಕ್ಕೆ ಪ್ರದರ್ಶನ ನೀಡುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಘಟನಾ ಸ್ಥಳದಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿ ನೆರೆದಿದ್ದ ಪ್ರೇಕ್ಷಕರನ್ನು ಆತಂಕಕ್ಕೆ ದೂಡಿತು.

ಪತನಕ್ಕೆ ಕಾರಣವೇನು?:

ನೆಗೆಟಿವ್ ಜಿ-ಫೋರ್ಸ್ ಎಂದರೆ ಗುರುತ್ವಾಕರ್ಷಣೆಯ ವಿರುದ್ಧ ದಿಕ್ಕಿನಲ್ಲಿ ಬರುವ ತೀವ್ರ ಒತ್ತಡ. ಪ್ರದರ್ಶನದ ವೇಳೆ ತೇಜಸ್‌ ವಿಮಾನದ ಪೈಲಟ್ ಒಂದು ತೀವ್ರವಾದ ನೆಗೆಟಿವ್ ಜಿ ತಿರುವನ್ನು (ವಿಮಾನದ ಮುಂಭಾಗವನ್ನು ತೀಕ್ಷ್ಣವಾಗಿ ಕೆಳಗೆ ತಳ್ಳುವುದು) ಪಡೆದುಕೊಂಡರು. ಆಗ ವಿಮಾನಕ್ಕೆ ಬಲವಾದ ನೆಗೆಟಿವ್ ಒತ್ತಡ ಬಂತು. ಆದರೆ ನೆಗೆಟಿವ್ ಜಿ ತಿರುವಿನ ನಂತರ ವಿಮಾನವನ್ನು ಮತ್ತೆ ಸಾಮಾನ್ಯ ಸ್ಥಿತಿಗೆ ತರಲು ಅವರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ವಿಮಾನವು ‘ಫ್ರೀ ಫಾಲ್’ (ರಭಸದಿಂದ ಕೆಳಮುಖವಾಗಿ) ರೀತಿಯಲ್ಲಿ ಕೆಳಗೆ ಬಿದ್ದು ಅಪಘಾತಕ್ಕೀಡಾಯಿತು ಎಂದು ಮೂಲಗಳು ತಿಳಿಸಿವೆ.

2ನೇ ದುರಂತ:

2001ರಲ್ಲಿ ವಾಯುಪಡೆ ಸೇರಿದ ನಂತರ ತೇಜಸ್‌ ಪತನ 2ನೇ ಬಾರಿ. ಮೊದಲ ಬಾರಿ 2024ರ ಮಾರ್ಚ್‌ನಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಮೊದಲ ತೇಜಸ್‌ ಪತನವಾಗಿತ್ತು. ಆದರೆ ಪೈಲಟ್‌ ಬದುಕುಳಿದಿದ್ದರು. . ಈ ವಿಮಾನವು ಎಚ್‌ಎಎಲ್‌ ಅಭಿವೃದ್ಧಿಪಡಿಸಿದ ಒಂದೇ ಆಸನದ ಹಗುರ ಯುದ್ಧವಿಮಾನವಾಗಿದೆ.

ತನಿಖೆಗೆ ಆದೇಶ:

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ವಾಯುಪಡೆ, ‘ದುಬೈನಲ್ಲಿ ನಡೆದ ವೈಮಾನಿಕ ಪ್ರದರ್ಶನದ ವೇಳೆ ನಮ್ಮ ತೇಜಸ್ ಯುದ್ಧವಿಮಾನ ಅಪಘಾತಕ್ಕೀಡಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಪೈಲಟ್‌ ಮೃತಪಟ್ಟಿದ್ದಾರೆ. ಪ್ರಾಣಹಾನಿಗೆ ವಾಯುಪಡೆ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ. ಈ ದುಃಖದ ಸಮಯದಲ್ಲಿ ಮೃತರ ಕುಟುಂಬದೊಂದಿಗೆ ನಾವಿದ್ದೇವೆ. ಅಪಘಾತದ ಕಾರಣ ತಿಳಿಯಲು ಸಮಗ್ರ ತನಿಖೆ ನಡೆಸಲಾಗುತ್ತದೆ’ ಎಂದು ತಿಳಿಸಿದೆ.ಘಟನೆಗೆ ರಕ್ಷಣಾ ಪಡೆಗಳ ಮುಖ್ಯಸ್ಥ ಜ. ಅನಿಲ್ ಚೌಹಾಣ್ ಸೇರಿ ಹಿರಿಯ ಅಧಿಕಾರಿಗಳು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

Read more Articles on