ಸಾರಾಂಶ
ಐಸಿ-814 ಕಂದಹಾರ್ ವಿಮಾನ ಹೈಜಾಕ್ ಕುರಿತ ವೆಬ್ಸೀರಿಸ್ನಲ್ಲಿ ಉಗ್ರರನ್ನು ಮಾನವೀಯವಾಗಿ ಬಿಂಬಿಸಲಾಗಿದೆ ಎಂಬ ಟೀಕೆಗಳ ಹಿನ್ನೆಲೆಯಲ್ಲಿ ನೆಟ್ಫ್ಲಿಕ್ಸ್ ಇಂಡಿಯಾ ಅಧಿಕಾರಿಗಳು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ನವದೆಹಲಿ: ಐಸಿ-814 ಕಂದಹಾರ್ ವಿಮಾನ ಹೈಜಾಕ್ ಕಥೆ ಹೊಂದಿರುವ ವೆಬ್ಸೀರಿಸ್ ಬಗ್ಗೆ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ನೆಟ್ಫ್ಲಿಕ್ಸ್ ಇಂಡಿಯಾದ ಹಿರಿಯ ಅಧಿಕಾರಿ ಮೋನಿಕಾ ಶೆರ್ಗಿಲ್, ಮಂಗಳವಾರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಂಜಯ್ ಜಾಜೂರನ್ನು ಭೇಟಿಯಾಗಿದ್ದಾರೆ. ಈ ವೇಳೆ ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆಯಾಗದಂತೆ ವಿಷಯ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.
ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾದ ವೆಬ್ಸೀರೀಸ್ನಲ್ಲಿ ‘ಪಾಕಿಸ್ತಾನದ ಮುಸ್ಲಿಂ ಉಗ್ರರು ಅಪಹರಣದ ವೇಳೆ ಬಳಸಿದ್ದ ಹಿಂದೂ ಕೋಡ್ನೇಮ್ಗಳನ್ನು ಮಾತ್ರ ಚಿತ್ರದಲ್ಲಿ ತೋರಿಸಲಾಗಿತ್ತು. ಅವರ ಮೂಲ ಹೆಸರನ್ನು ಎಲ್ಲೂ ತೋರಿಸಿರಲಿಲ್ಲ. ಜೊತೆಗೆ ಉಗ್ರರನ್ನು ಮಾನವೀಯತೆಯುಳ್ಳವರಂತೆ ತೋರಿಸಲಾಗಿದ್ದು ಜನರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಶೆರ್ಗಿಲ್ ಅವರೊಂದಿಗೆ ಚರ್ಚಿಸಿದ ಅಧಿಕಾರಿಗಳು, ‘ಭಾರತೀಯ ಸಂಸ್ಕೃತಿಯನ್ನು ಗೌರವಿಸಬೇಕು. ರಾಷ್ಟ್ರೀಯ ಭಾವನೆಗಳೊಂದಿಗೆ ಆಟವಾಡುವ ಹಕ್ಕು ಯಾರಿಗೂ ಇಲ್ಲ. ವಿದೇಶಿಗರು ನಮ್ಮ ಮೌಲ್ಯಗಳ ಬಗ್ಗೆ ಹಗುರವಾಗಿ ಮಾತನಾಡುವಂತೆ ಮಾಡುವುದು ಸಲ್ಲದು’ ಎಂದು ಎಚ್ಚರಿಸಿದ್ದಾರೆ.
ಅಲ್ಲದೆ ‘ಒಟಿಟಿ ವೇದಿಕೆಗಳಲ್ಲಿ ಹೊಸ ಸರಣಿ ಪ್ರಸಾರಕ್ಕೆ ಮೊದಲು ನಿಖರ ಮಾಹಿತಿ ಏಕೆ ಪರಿಶೀಲಿಸುವುದಿಲ್ಲ? ಅಪಹರಣಕಾರರ ನಿಜ ಹೆಸರು ಏಕೆ ತೋರಿಸಿಲ್ಲ? ಸಂಧಾನಕಾರರನ್ನು ದುರ್ಬಲರಂತೆ ಹಾಗೂ ಅಪಹರಣಕಾರರನ್ನೇಕೆ ಸಂವೇದನಾಶೀಲರಂತೆ ಏಕೆ ಬಿಂಬಿಸಲಾಗಿದೆ?’ ಎಂಬಿತ್ಯಾದಿ ಪ್ರಶ್ನೆಗಳನ್ನು ಶೆರ್ಗಿಲ್ ಅವರಿಗೆ ಕೇಳಲಾಗಿತ್ತು ಎನ್ನಲಾಗಿದೆ.
ತನ್ನ ತಪ್ಪನ್ನು ಒಪ್ಪಿಕೊಂಡಿರುವ ನೆಟ್ಫ್ಲಿಕ್ಸ್, ಸರಣಿಯ ಆರಂಭದಲ್ಲಿ ಪ್ರದರ್ಶಿಸಲಾಗುವ ಡಿಸ್ಕ್ಲೇಮರ್ನಲ್ಲಿ ಅಪಹರಣಕಾರರ ನಿಜವಾದ ಹೆಸರನ್ನು ತೋರಿಸುವುದಾಗಿ ಭರವಸೆ ನೀಡಿದೆ.