ಸಾರಾಂಶ
ನವದೆಹಲಿ: ದೆಹಲಿಯ ರಾಜಪಥದಲ್ಲಿ ಜ.26ರಂದು ನಡೆಯುವ ಚಿತ್ತಾಕರ್ಷಕ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಇದೇ ಮೊದಲ ಬಾರಿ ಸೈನಿಕ ದಂಪತಿ ಭಾಗಿಯಾಗಲಿದ್ದಾರೆ.
ಮೈಸೂರಿನ ಕ್ಯಾಪ್ಟನ್ ಸಿ.ಟಿ.ಸುಪ್ರೀತಾ ಮತ್ತು ತಮಿಳುನಾಡಿನ ಮೇಜರ್ ಜೆರ್ರಿ ಬ್ಲೇಜ್ ಕರ್ತವ್ಯಪಥದಲ್ಲಿ ತಮ್ಮ ತಮ್ಮ ತಂಡಗಳೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.
ಈ ಇಬ್ಬರೂ ಮೊದಲು ನ್ಯಾಷನಲ್ ಕೆಡೆಟ್ ಕೋರ್(ಎನ್ಸಿಸಿ)ನಲ್ಲಿದ್ದು, ಇದೀಗ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜೆರ್ರಿ ಮದ್ರಾಸ್ ರೆಜಿಮೆಂಟ್ನಲ್ಲಿದ್ದರೆ, ಕ್ಯಾ। ಸುಪ್ರೀತಾ ಕೋರ್ ಮಿಲಿಟರಿ ಪೊಲೀಸ್ ಪಡೆಯಲ್ಲಿದ್ದಾರೆ.
ಸುಪ್ರೀತಾ ಈ ಮೊದಲು 2016ರಲ್ಲಿ ಹಾಗೂ ಜೆರ್ರಿ 2014ರಲ್ಲಿ ಎನ್ಸಿಸಿಯಿಂದ ಪಥಸಂಚಲನದಲ್ಲಿ ಭಾಗಿಯಾಗಿದ್ದರು. ಪ್ರಸ್ತುತ ಇವರಿಬ್ಬರು ದೆಹಲಿಯಲ್ಲಿ ನೆಲೆಸಿದ್ದು, ಇಬ್ಬರೂ ಪ್ರತ್ಯೇಕ ಸೈನಿಕ ದಳದೊಂದಿಗೆ ಪಥಸಂಚಲನದಲ್ಲಿ ಭಾಗಿಯಾಗುತ್ತಿದ್ದಾರೆ.
ಈ ಕುರಿತಾಗಿ ಶನಿವಾರ ಮಾತನಾಡಿರುವ ಕ್ಯಾಪ್ಟನ್ ಸುಪ್ರೀತಾ ಹಾಗೂ ಜೆರ್ರಿ, ‘ಗಣರಾಜ್ಯೋತ್ಸವ ಪಥಸಂಚಲನದಲ್ಲಿ ದಂಪತಿ ಭಾಗಿಯಾಗುತ್ತಿರುವುದು ಇದೇ ಮೊದಲ ಸಲವಾಗಿದೆ. ಇದು ಯೋಜಿತವಲ್ಲ. ನಾವಿಬ್ಬರೂ ಆಯ್ಕೆಯಾಗಿರುವು ಕಾಕತಾಳೀಯವಷ್ಟೇ’ ಎಂದು ಹೇಳಿದರು.
‘ನನ್ನ ಪತಿ ಮದ್ರಾಸ್ ರೆಜಿಮೆಂಟ್ನಿಂದ ಹಾಗೂ ನಾನು ಮಿಲಿಟರಿ ಪೊಲೀಸ್ ಕೋರ್ನಿಂದ ಪಥಸಂಚಲನದಲ್ಲಿ ಭಾಗಿಯಾಗುತ್ತಿದ್ದೇವೆ. ಇಬ್ಬರು ಸಹ ಪತ್ಯೇಕವಾಗಿ ಅಭ್ಯಾಸದಲ್ಲಿ ಭಾಗಿಯಾಗುತ್ತಿದ್ದೇವೆ. ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗಿಯಾಗುತ್ತಿರುವುದು ಹೆಮ್ಮೆಯಾಗುತ್ತಿದೆ’ ಎಂದು ಸುಪ್ರೀತಾ ಹೇಳಿದ್ದಾರೆ.
ಮೈಸೂರು, ಬೆಂಗಳೂರಲ್ಲಿ ವಿದ್ಯಾಭ್ಯಾಸ: ಸುಪ್ರೀತಾ ಮೈಸೂರಿನವರಾಗಿದ್ದು, ಅಲ್ಲಿನ ಜೆಎಸ್ಎಸ್ ಕಾಲೇಜಿನಲ್ಲಿ ಕಾನೂನು ವಿಷಯದಲ್ಲಿ ಪದವಿ ಪಡೆದುಕೊಂಡಿದ್ದಾರೆ.
ಬ್ಲೇಜ್ ತಮಿಳುನಾಡಿನ ವೆಲ್ಲಿಂಗ್ಟನ್ನವರಾಗಿದ್ದು, ಬೆಂಗಳೂರಿನ ಜೈನ್ ವಿವಿಯಲ್ಲಿ ಪದವಿ ಪಡೆದುಕೊಂಡಿದ್ದಾರೆ.
ನನ್ನ ಪತಿ ಮದ್ರಾಸ್ ರೆಜಿಮೆಂಟ್ನಿಂದ ಹಾಗೂ ನಾನು ಮಿಲಿಟರಿ ಪೊಲೀಸ್ ಕೋರ್ನಿಂದ ಪಥಸಂಚಲನದಲ್ಲಿ ಭಾಗಿಯಾಗುತ್ತಿದ್ದೇವೆ. ಇಬ್ಬರು ಸಹ ಪತ್ಯೇಕವಾಗಿ ಅಭ್ಯಾಸದಲ್ಲಿ ಭಾಗಿಯಾಗುತ್ತಿದ್ದೇವೆ. ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗಿಯಾಗುತ್ತಿರುವುದು ಹೆಮ್ಮೆಯಾಗುತ್ತಿದೆ ಎಂದು ಕ್ಯಾಪ್ಟನ್ ಸಿ.ಟಿ. ಸುಪ್ರೀತಾ ಹೇಳಿದರು.