ಸಾರಾಂಶ
ಇಸ್ಲಾಮಾಬಾದ್: ಭಾರತವು ಚಂದ್ರಯಾನ ಮಾಡುವಷ್ಟು ಅಭಿವೃದ್ಧಿಯಾಗುತ್ತಿದ್ದರೂ ಪಾಕಿಸ್ತಾನದ ಕರಾಚಿಯಲ್ಲಿ ಮಕ್ಕಳು ಹೊಂಡಕ್ಕೆ ಬಿದ್ದು ಸಾಯುವುದು ತಪ್ಪುತ್ತಿಲ್ಲ ಎಂಬುದಾಗಿ ಪಾಕಿಸ್ತಾನದ ಕುರಿತು ಸ್ವತಃ ಪಾಕ್ ಸಂಸದ ಸೈಯ್ಯದ್ ಮುಸ್ತಫಾ ಕಮಲ್ ಸಂಸತ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ರಾಜಧಾನಿ ಕರಾಚಿಯಲ್ಲಿನ ಅವ್ಯವಸ್ಥೆ ಕುರಿತು ಇತ್ತೀಚೆಗೆ ಸಂಸತ್ತಿನಲ್ಲಿ ಮಾತನಾಡಿದ ಮುಸ್ತಫಾ, ‘ಪಾಕಿಸ್ತಾನಕ್ಕೆ ಬಹುಪಾಲು ಆದಾಯ ತಂದುಕೊಡುವ ಕರಾಚಿ ನಗರ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿ ಮೂಲಸೌಕರ್ಯಗಳನ್ನು ಕಿಂಚಿತ್ತೂ ಅಭಿವೃದ್ಧಿ ಮಾಡಲಾಗಿಲ್ಲ. ಭಾರತ ಸೇರಿದಂತೆ ಪ್ರಪಂಚದ ಹಲವು ರಾಷ್ಟ್ರಗಳು ಚಂದ್ರಯಾನ ಮಾಡುವಷ್ಟು ಅಭಿವೃದ್ಧಿ ಹೊಂದಿದ್ದರೆ ನಮ್ಮ ಕರಾಚಿಯಲ್ಲಿ ಮಕ್ಕಳು ಹೊಂಡಕ್ಕೆ ಬಿದ್ದು ಸಾಯುವುದನ್ನು ತಪ್ಪಿಸುವಷ್ಟೂ ಅಭಿವೃದ್ಧಿ ಕಂಡಿಲ್ಲ’ ಎಂದು ಕಿಡಿಕಾರಿದರು.
ಸಿಂಧ್ ಪ್ರಾಂತ್ಯದಲ್ಲಿನ 48000 ಶಾಲೆಗಳ ಪೈಕಿ 11000 ಶಾಲೆಗಳು ದೆವ್ವದ ಮನೆಗಳಾಗಿವೆ. ಅಲ್ಲಿಗೆ ಮಕ್ಕಳೇ ಹೋಗುತ್ತಿಲ್ಲ. ಲಕ್ಷಾಂತರ ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ ಎಂದು ದೇಶದಲ್ಲಿನ ಶಿಕ್ಷಣದ ಸ್ಥಿತಿಗತಿ ಬಗ್ಗೆ ಮುಸ್ತಫಾ ಬೆಳಕು ಚೆಲ್ಲಿದರು.