ಐಪಿಎಲ್‌ ಸಂಭ್ರಮಾಚರಣೆ: ನಿಯಮ ರೂಪಿಸಲು ಸಮಿತಿ

| N/A | Published : Jun 15 2025, 07:12 AM IST

BCCI Logo

ಸಾರಾಂಶ

ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಘಟನೆಯಿಂದ ಎಚ್ಚೆತ್ತಿರುವ ಬಿಸಿಸಿಐ, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸಲು ಸಮಿತಿಯೊಂದನ್ನು ರಚಿಸಿದೆ.

ನವದೆಹಲಿ: ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಘಟನೆಯಿಂದ ಎಚ್ಚೆತ್ತಿರುವ ಬಿಸಿಸಿಐ, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸಲು ಸಮಿತಿಯೊಂದನ್ನು ರಚಿಸಿದೆ.

ಶನಿವಾರ ನಡೆದ ಅಪೆಕ್ಸ್‌ ಕೌನ್ಸಿಲ್‌ನಲ್ಲಿ ಸಮಿತಿ ರಚಿಸಲಾಯಿತು. ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ, ಖಜಾಂಚಿ ಪ್ರಭ್‌ತೇಜ್‌ ಸಿಂಗ್‌, ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಈ ಸಮಿತಿಯಲ್ಲಿ ಇದ್ದಾರೆ. 15 ದಿನಗಳಲ್ಲಿ ಈ ಸಮಿತಿಯು ಸಂಭ್ರಮಾಚರಣೆಗೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಬಿಸಿಸಿಐಗೆ ಸಲ್ಲಿಸಲಿದೆ.

ಸ್ಥಳ ನಿಗದಿ: ಸಭೆಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ಸರಣಿಗೆ ಸ್ಥಳ ನಿಗದಿಪಡಿಸಲಾಯಿತು. ಮೊದಲ ಏಕದಿನ ಪಂದ್ಯ 2026ರ ಜನವರಿ 11ಕ್ಕೆ ಬರೋಡಾದಲ್ಲಿ ನಡೆಯಲಿದೆ. ಬಳಿಕ ರಾಜ್‌ಕೋಟ್‌(ಜ.14), ಇಂದೋರ್‌(ಜ.18)ನಲ್ಲಿ ಮತ್ತೆರಡು ಪಂದ್ಯಗಳು ನಿಗದಿಯಾಗಿವೆ.ಟಿ20 ಸರಣಿಯ 5 ಪಂದ್ಯಗಳಿಗೆ ನಾಗ್ಪುರ(ಜ.21), ರಾಯ್ಪುರ(ಜ.23), ಗುವಾಹಟಿ(ಜ.25), ವಿಶಾಖಪಟ್ಟಣಂ(ಜ.28) ಹಾಗೂ ತಿರುವನಂತಪುರಂ(ಜ.31) ಆತಿಥ್ಯ ವಹಿಸಲಿವೆ.

ದೇಸಿ ಕ್ರಿಕೆಟ್‌: 2025-26ರ ದೇಸಿ ಕ್ರಿಕೆಟ್‌ನ ಮೊದಲ ಟೂರ್ನಿಯಾಗಿ ದುಲೀಪ್‌ ಟ್ರೋಫಿಯು ಈ ವರ್ಷ ಆ.28ಕ್ಕೆ ಆರಂಭಗೊಳ್ಳಲಿದೆ. ಟೂರ್ನಿ ಸೆ.15ಕ್ಕೆ ಕೊನೆಗೊಳ್ಳಲಿದೆ. ಇರಾನಿ ಕಪ್‌ ಅ.1ರಿಂದ 5ರ ವರೆಗೆ ನಡೆಯಲಿದೆ. ರಣಜಿ ಟ್ರೋಫಿಯ ಮೊದಲ ಹಂತ ಅ.15ರಿಂದ ನ.19ರ ವರೆಗೆ, 2ನೇ ಹಂತ 2026ರ ಜ.22ರಿಂ ಫೆ.1ರ ವರೆಗೆ ನಡೆಯಲಿದೆ. ನಾಕೌಟ್‌ ಪಂದ್ಯಗಳು ಫೆ.6ರಿಂದ 28ರ ವರೆಗೆ ನಿಗದಿಯಾಗಿದೆ. ಮುಷ್ತಾಕ್‌ ಅಲಿ 2025ರ ನ.26ರಿಂದ ಡಿ.18ರ ವರೆಗೆ, ವಿಜಯ್‌ ಹಜಾರೆ ಡಿ.24ರಿಂದ ಜ.18ರ ವರೆಗೆ ನಡೆಯಲಿದೆ.

Read more Articles on