ಸಾರಾಂಶ
ವಕ್ಫ್ ಆಸ್ತಿ ವಿವಾದದ ಕುರಿತು ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಅಮಿತ್ ಶಾ ಪ್ರಸ್ತಾಪ ಮಾಡಿದ್ದಾರೆ. ಜೊತೆಗೆ ಕರ್ನಾಟಕದ ಬೆಳವಣಿಗೆ ಮುಂದಿಟ್ಟುಕೊಂಡು, ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಸಾಂಗ್ಲಿ: ಕರ್ನಾಟಕದಲ್ಲಿ ಭಾರೀ ರಾಜಕೀಯ ಗದ್ದಲಕ್ಕೆ ಕಾರಣವಾಗಿರುವ ವಕ್ಫ್ ಆಸ್ತಿ ವಿವಾದದ ಕುರಿತು ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಅಮಿತ್ ಶಾ ಪ್ರಸ್ತಾಪ ಮಾಡಿದ್ದಾರೆ. ಜೊತೆಗೆ ಕರ್ನಾಟಕದ ಬೆಳವಣಿಗೆ ಮುಂದಿಟ್ಟುಕೊಂಡು, ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಇಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಶುಕ್ರವಾರ ಚುನಾವಣಾ ಪ್ರಚಾರ ಮಾಡಿ ಮಾತನಾಡಿದ ಅಮಿತ್ ಶಾ, ‘ಬಾಳಾ ಸಾಹೇಬ್ ಠಾಕ್ರೆ ಬಗ್ಗೆ ಮಾತನಾಡುವ ಅವರ ಪುತ್ರ ಉದ್ಧವ್ ಠಾಕ್ರೆ, ಔರಂಗಾಬಾದ್ ಹೆಸರು ಬದಲಾವಣೆ ಪ್ರಸ್ತಾಪ ವಿರೋಧಿಸಿದರು.
ಇದೀಗ ಅವರು ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧ ಮಾಡುವವರ ಜೊತೆ ಕೈ ಜೋಡಿಸಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲಿ ಒಂದಿಡೀ ಹಳ್ಳಿಯನ್ನೇ ವಕ್ಫ್ ಮಂಡಳಿ ಆಸ್ತಿಯೆಂದು ಘೋಷಿಸಲಾಗಿತ್ತು. ಹಾಗಿದ್ದರೆ ಹೇಳಿ, ನಾವು ವಕ್ಫ್ ಕಾಯ್ದೆಗೆ ತಿದ್ದುಪಡಿ ತರಬೇಕೇ? ಬೇಡವೇ’ ಎಂದು ಪ್ರಶ್ನಿಸಿದರು.