ಸಾರಾಂಶ
ನವದೆಹಲಿ: ದೆಹಲಿಯ ಆಮ್ ಆದ್ಮಿ ಪಕ್ಷದ 7 ಶಾಸಕರಿಗೆ ಬಿಜೆಪಿ ತಲಾ 25 ಕೋಟಿ ರು. ಆಮಿಷ ಒಡ್ಡಿದೆ ಹಾಗೂ ಬಿಜೆಪಿಗೆ ಬರುವಂತೆ ಆಹ್ವಾನಿಸಿ ನಮ್ಮ ಸರ್ಕಾರ ಕೆಡವಲು ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ‘ಬಿಜೆಪಿಯ ಏಜೆಂಟರು ನಮ್ಮ ಪಕ್ಷದ 21 ಶಾಸಕರಿಗೆ ಕರೆ ಮಾಡಿ ಕೇಜ್ರಿವಾಲ್ ಬಂಧನದೊಂದಿಗೆ ದೆಹಲಿ ಸರ್ಕಾರ ಉರುಳಲಿದೆ ಎಂದು ಹೇಳಿದ್ದಲ್ಲದೆ, ಬಿಜೆಪಿಗೆ ಬರುವಂತೆ ಆಹ್ವಾನಿಸಿದ್ದಾರೆ.
ಅಲ್ಲದೆ 7 ಶಾಸಕರಿಗೆ ತಲಾ 25 ಕೋಟಿ ರು. ನೀಡುವ ಜೊತೆಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವ ಆಮಿಷ ಒಡ್ಡಿದ್ದಾರೆ’ ಎಂದಿದ್ದಾರೆ.‘
‘ಆದರೆ ನಮ್ಮ ಪಕ್ಷದ ನಿಷ್ಠಾವಂತರು. ಬಿಜೆಪಿಯ ಆಮಿಷಕ್ಕೆ ಮರುಳಾಗಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿಯ ಸಚಿವ ಅತಿಷಿ, ‘ಬಿಜೆಪಿಯು ಆಪರೇಷನ್ ಕಮಲ 2.0 ಆರಂಭ ಮಾಡಿದೆ. ಇದೇ ಪ್ರಯತ್ನವನ್ನೂ ಕಳೆದ ವರ್ಷವೂ ಮಾಡಿ ವಿಫಲರಾಗಿದ್ದರು. ಈ ಬಾರಿಯೂ ವಿಫಲರಾಗುತ್ತಾರೆ’ ಎಂದು ಟೀಕಿಸಿದರು.
ಬಿಜೆಪಿ ನಕಾರ:ಇದಕ್ಕೆ ರಾಜ್ಯ ಬಿಜೆಪಿ ಕಾರ್ಯದರ್ಶಿ ಹರೀಶ್ ಖುರಾನಾ ತಿರುಗೇಟು ನೀಡಿದ್ದು, ‘ಆಪ್ ಪಕ್ಷದ ಆರೋಪ ಆಧಾರರಹಿತವಾಗಿದೆ. ಎಲ್ಲ 7 ಶಾಸಕರು ಮತ್ತು ಅವರಿಗೆ ಕರೆ ಮಾಡಿದ ವ್ಯಕ್ತಿಗಳ ಹೆಸರನ್ನು ಕೇಜ್ರಿವಾಲ್ ಬಹಿರಂಗಪಡಿಸಬೇಕು’ ಎಂದು ಒತ್ತಾಯ ಮಾಡಿದ್ದಾರೆ.