ಸಾರಾಂಶ
ಖಲಿಸ್ತಾನಿ ಸಂಘಟನೆ ಸಿಖ್ ಫಾರ್ ಜಸ್ಟೀಸ್, ದೇಶದ ಮುಸಲ್ಮಾನರು, ತಮಿಳರು ಹಾಗೂ ಮಣಿಪುರದ ಕ್ರೈಸ್ತರಿಗೆ ಭಾರತದಿಂದ ಬೇರ್ಪಡುವಂತೆ ಪ್ರಚೋದಿಸುತ್ತಿದೆ 3 ಎಂದು ಗುಪ್ತಚರ ಸಂಸ್ಥೆಗಳು ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.
ನವದೆಹಲಿ: ವಿದೇಶದಲ್ಲಿದ್ದುಕೊಂಡು ಆಗಾಗ ಭಾರತ ಹಾಗೂ ಇಲ್ಲಿನ ನಾಯಕರಿಗೆ ಜೀವ ಬೆದರಿಕೆ ಒಡ್ಡಿ ಪುಂಡಾಟ ಮೆರೆಯುತ್ತಿರುವ ಗುರುಪತ್ವಂತ್ ಸಿಂಗ್ ಪನ್ನೂನ್ ನೇತೃತ್ವದ ನಿಷೇಧಿತ ಖಲಿಸ್ತಾನಿ ಸಂಘಟನೆ ಸಿಖ್ ಫಾರ್ ಜಸ್ಟೀಸ್, ದೇಶದ ಮುಸಲ್ಮಾನರು, ತಮಿಳರು ಹಾಗೂ ಮಣಿಪುರದ ಕ್ರೈಸ್ತರಿಗೆ ಭಾರತದಿಂದ ಬೇರ್ಪಡುವಂತೆ ಪ್ರಚೋದಿಸುತ್ತಿದೆ 3 ಎಂದು ಗುಪ್ತಚರ ಸಂಸ್ಥೆಗಳು ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.
ಆ ಸಂಘಟನೆಯ ಮೇಲಿನ ನಿಷೇಧವನ್ನು ಇನ್ನು 5 ವರ್ಷ ವಿಸ್ತರಿಸುವ ಗೆಜೆಟ್ ಅಧಿಸೂಚನೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಅನೇಕರಿಗೆ ಬೆದರಿಕೆ ಒಡ್ಡಲಾಗಿದೆ ಎಂದೂ ಉಲ್ಲೇಖಿಸಲಾಗಿದೆ.
‘ಜನರನ್ನು ಕೋಮಿನ ಆಧಾರದಲ್ಲಿ ವಿಭಜಿಸಿ, ಭಾರತ ವಿರೋಧಿ ಕೃತ್ಯಗಳಿಗೆ ಖಲಿಸ್ತಾನಿಗಳು ಬಳಸಿಕೊಳ್ಳುತ್ತಿದ್ದಾರೆ. ಮಣಿಪುರದ ಕ್ರೈಸ್ತರಿಗೆ ಪ್ರತ್ಯೇಕ ದೇಶಕ್ಕಾಗಿ ಆಗ್ರಹಿಸುವಂತೆ ಪ್ರಚೋದಿಸುತ್ತಿದ್ದರೆ, ತಮಿಳುನಾಡಿನಲ್ಲಿ ದ್ರಾವಿಡಸ್ತಾನದ ಬೇಡಿಕೆ ಇಡಲಾಗುತ್ತಿದೆ. ಅಲ್ಪಸಂಖ್ಯಾತರ ಶೋಷಣೆಯಾಗುತ್ತಿದೆ ಎನ್ನುವ ಮೂಲಕ ಮುಸಲ್ಮಾನರನ್ನು ಕೆರಳಿಸಿ ಉರ್ದುಸ್ತಾನ ನಿರ್ಮಾಣಕ್ಕೆ ಸಂಚು ರೂಪಿಸಲಾಗುತ್ತಿದೆ. ಸರ್ಕಾರ ಕಿರುಕುಳ ನೀಡುತ್ತಿದೆ ಎನ್ನುವ ಮೂಲಕ ದಲಿತರನ್ನೂ ಪ್ರಚೋದಿಸಲಾಗುತ್ತಿದೆ ’ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ.
ಈಗಾಗಲೇ ಕೋಮು ಆದಾರದಲ್ಲಿ ಸುದೀರ್ಘ ಹಿಂಸಾಚಾರ ಕಂಡಿರುವ ಮಣಿಪುರದಲ್ಲಿ ಬಹುತೇಕ ಮೈತೇಯಿಗಳು ಹಿಂದೂಗಳಾದರೂ, ಮುಸಲ್ಮಾನರು ಹಾಗೂ ಕ್ರೈಸ್ತರೂ ಇದ್ದಾರೆ. ಕುಕಿಗಳೂ ಕ್ರೈಸ್ತರಾಗಿದ್ದಾರೆ. ಇವರನ್ನೆಲ್ಲಾ ಸರ್ಕಾರದ ವಿರುದ್ಧ ಎತ್ತಿಕಟ್ಟುವೆ ಕೆಲಸಕ್ಕೆ ಖಲಿಸ್ತಾನಿಗಳು ಕೈಹಾಕಿದ್ದಾರೆ ಎನ್ನಲಾಗಿದೆ.