ಸಾರಾಂಶ
‘ವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ರಕ್ಷಿಸುವ ಯತ್ನ ನಡೆಯುತ್ತಿದೆ. ಸಂತ್ರಸ್ತೆ ಕುಟುಂಬಕ್ಕೆ ನ್ಯಾಯ ಕೊಡಿಸುವ ಬದಲು, ಆರೋಪಿ ಪರವಾಗಿ ಕೆಲಸ ನಡೆಯುತ್ತಿದೆ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ನವದೆಹಲಿ: ‘ವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ರಕ್ಷಿಸುವ ಯತ್ನ ನಡೆಯುತ್ತಿದೆ. ಸಂತ್ರಸ್ತೆ ಕುಟುಂಬಕ್ಕೆ ನ್ಯಾಯ ಕೊಡಿಸುವ ಬದಲು, ಆರೋಪಿ ಪರವಾಗಿ ಕೆಲಸ ನಡೆಯುತ್ತಿದೆ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಮೂಲಕ ತಮ್ಮ ಮಿತ್ರರಾದ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧವೇ ಕಿಡಿಕಾರಿದ್ದಾರೆ.ವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣದ ಕುರಿತು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್, ‘ಸಂತ್ರಸ್ತೆ ಕುಟುಂಬಕ್ಕೆ ನ್ಯಾಯ ಒದಗಿಸುವ ಬದಲು, ಆರೋಪಿಯನ್ನು ರಕ್ಷಿಸುವ ಯತ್ನ ನಡೆಯುತ್ತದೆ. ಇದು ಆಸ್ಪತ್ರೆ ಮತ್ತು ಸ್ಥಳೀಯ ಆಡಳಿತದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ’ ಎಂದು ಬರೆದುಕೊಂಡಿದ್ದಾರೆ.
‘ವೈದ್ಯರು ಮೆಡಿಕಲ್ ಕಾಲೇಜುಗಳಲ್ಲಿ ಸುರಕ್ಷಿತವಾಗಿಲ್ಲ ಎಂದಾಗ, ಪೋಷಕರು ಹೆಣ್ಣು ಮಕ್ಕಳನ್ನು ಓದಲು ಹೊರಗಡೆ ಹೇಗೆ ಕಳುಹಿಸುತ್ತಾರೆ? ನಿರ್ಭಯಾ ಪ್ರಕರಣದ ಬಳಿಕ ತಂದಿರುವ ಕಾನೂನುಗಳಲ್ಲಿಯೂ ಇಂತಹ ಅಪರಾಧಗಳನ್ನು ನಿಯಂತ್ರಿಸಲು ಏಕೆ ವಿಫಲವಾಗುತ್ತಿದ್ದೇವೆ?’ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಸಂತ್ರಸ್ತ ಕುಟುಂಬ ಪರವಾಗಿ ನಿಲ್ಲುವುದಾಗಿ ಹೇಳಿರುವ ರಾಹುಲ್, ‘ಈ ಘಟನೆ ವೈದ್ಯರಲ್ಲಿ ಅಸುರಕ್ಷಿತ ವಾತಾವರಣ ಹುಟ್ಟಿಕೊಳ್ಳುವುದಕ್ಕೆ ಕಾರಣವಾಗಿದೆ’ ಎಂದರು.
ಟಿಎಂಸಿ ಕಿಡಿ: ರಾಹುಲ್ ಹೇಳಿಕೆಗೆ ಟಿಎಂಸಿ ಕಿಡಿಕಾರಿದ್ದು, ‘ಕಾಂಗ್ರೆಸ್ ಆಳ್ವಿಕೆಯಲ್ಲಿ ಎಷ್ಟು ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದ್ದವು?’ ಎಂದು ಪ್ರಶ್ನಿಸಿದೆ.