ಸಾರಾಂಶ
ಉದ್ಯೋಗ ನೀಡಲು ಭೂಮಿಯನ್ನು ಲಂಚ ರೂಪದಲ್ಲಿ ಪಡೆದ ಆರೋಪ ಎದುರಿಸುತ್ತಿರುವ ಆರ್ಜೆಡಿ ನೇತಾರ ಲಾಲು ಪ್ರಸಾದ್ ಯಾದವ್ ಸೋಮವಾರ 10 ತಾಸು ಜಾರಿ ನಿರ್ದೇಶನಾಲಯದ (ಇ.ಡಿ.) ವಿಚಾರಣೆಗೆ ಹಾಜರಾದರು.
ಪಟನಾ: ತಾವು ರೈಲ್ವೆ ಸಚಿವರಾಗಿದ್ದಾಗ ರೈಲ್ವೆಯಲ್ಲಿ ಉದ್ಯೋಗ ನೀಡಲು ಭೂಮಿಯನ್ನು ಲಂಚ ರೂಪದಲ್ಲಿ ಪಡೆದ ಆರೋಪ ಎದುರಿಸುತ್ತಿರುವ ಆರ್ಜೆಡಿ ನೇತಾರ ಲಾಲು ಪ್ರಸಾದ್ ಯಾದವ್ ಸೋಮವಾರ 10 ತಾಸು ಜಾರಿ ನಿರ್ದೇಶನಾಲಯದ (ಇ.ಡಿ.) ವಿಚಾರಣೆಗೆ ಹಾಜರಾದರು.
ಪುತ್ರಿ ಮಿಸಾ ಭಾರತಿ ಜೊತೆಗೆ ಬೆಳಗ್ಗೆ 11 ಗಂಟೆ ವೇಳೆಗೆ ಲಾಲು ಇ.ಡಿ. ಕಚೇರಿಗೆ ಹಾಜರಾಗಿದ್ದರು. ಈ ವೇಳೆ ದೆಹಲಿಯಿಂದ ಆಗಮಿಸಿದ್ದ ಅಧಿಕಾರಿಗಳ ಲಾಲು ಅವರನ್ನು ರಾತ್ರಿ 9ರವರೆಗೆ ವಿಚಾರಣೆಗೆ ಒಳಪಡಿಸಿತು.
ಯುಪಿಎ ಸರ್ಕಾರದ ಅವಧಿಯಲ್ಲಿ ಈ ಹಗರಣ ನಡೆದ ಆರೋಪವಿದೆ. ಈ ನಡುವೆ ವಿಚಾರಣೆ ಕುರಿತು ಆಸ್ಟ್ರೇಲಿಯಾದಿಂದ ಪ್ರತಿಕ್ರಿಯೆ ನೀಡಿರುವ ಲಾಲು ಅವರ ಇನ್ನೋರ್ವ ಪುತ್ರಿ ರೋಹಿಣಿ ಆಚಾರ್ಯ, ‘ನನ್ನ ತಂದೆಯ ಅನಾರೋಗ್ಯದ ಹೊರತಾಗಿಯೂ ಅವರ ಜೊತೆ ಯಾರನ್ನೂ ವಿಚಾರಣೆಗೆ ಸ್ಥಳಕ್ಕೆ ಹೋಗಲು ಅಧಿಕಾರಿಗಳು ಬಿಟ್ಟಿಲ್ಲ.
ಒಂದು ವೇಳೆ ನನ್ನ ತಂದೆಗೆ ಏನಾದರೂ ಆದರೆ ನನ್ನಷ್ಟು ಕೆಟ್ಟವರು ಇನ್ಯಾರೂ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.