ಸಾರಾಂಶ
ಪ್ರಯಾಗರಾಜ್: ಜ.29ರ ಮೌನಿ ಅಮಾವಾಸ್ಯೆಯಂದು 10 ಕೋಟಿ ಜನ ಮಹಾಕುಂಭ ಮೇಳದಲ್ಲಿ ಅಮೃತ ಸ್ನಾನ ಮಾಡುವ ನಿರೀಕ್ಷೆಯಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಯಾತ್ರಿಕರ ಸುರಕ್ಷತೆ, ಜನದಟ್ಟನೆ ಮತ್ತು ಸಂಚಾರ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿಯೂ ತಿಳಿಸಿದೆ.
ಮಹಾಕುಂಭ ಮೇಳದಲ್ಲಿ ಕೆಲವು ವಿಶೇಷ ದಿನಗಳ ಸ್ನಾನವನ್ನು ‘ಅಮೃತ ಸ್ನಾನ /ಶಾಹಿ ಸ್ನಾನ’ ಎಂದು ಕರೆಯಲಾಗುತ್ತದೆ. ಮಕರ ಸಂಕ್ರಾಂತಿ, ಪುಷ್ಯ ಹುಣ್ಣಿಮೆ ಬಳಿಕ ಮೌನಿ ಅಮಾವಾಸ್ಯೆ ಅಂಥ 3ನೇ ವಿಶೇಷ ದಿನವಾಗಿದೆ.
ನಂತರ ಫೆ.3ರಂದು ಬಸಂತ ಪಂಚಮಿ, ಫೆ.12ರಂದು ಮಾಘಿ ಪೂರ್ಣಿಮಾ ಹಾಗೂ ಫೆ.26ರ ಶಿವರಾತ್ರಿಯಂದೂ ಶಾಹಿ ಸ್ನಾನಗಳು ನಡೆಯಲಿವೆ.
ನಟನೆ ತೊರೆದು ಸನ್ಯಾಸ ಸ್ವೀಕರಿಸಿದ ನಟಿ ಮಮತಾ!
ಪ್ರಯಾಗರಾಜ್: ಒಂದೊಮ್ಮೆ ಬಾಲಿವುಟ್ ಹಾಗೂ ದಕ್ಷಿಣದ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಮಮತಾ ಕುಲಕರ್ಣಿ ಇದೀಗ ಲೌಕಿಕ ಜಗತ್ತನ್ನು ತೊರೆದು ಸನ್ಯಾಸ ಸ್ವೀಕರಿಸಿದ್ದಾರೆ.ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾಗವಹಿಸಿದ ಕುಲಕರ್ಣಿ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಬಳಿಕ ತಮ್ಮ ಸ್ವಂತ ಪಿಂಡ ಪ್ರದಾನ ಮಾಡುವ ಮೂಲಕ ಜೂನಾ ಅಖಾಡದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕಿನ್ನರ ಅಖಾಡಕ್ಕೆ ಸೇರಿಕೊಂಡಿದ್ದು, ಮಹಾಮಂಡಲೇಶ್ವರರಾಗಿದ್ದಾರೆ. ಇವರಿಗೆ ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ ತ್ರಿಪಾಠಿ ದೀಕ್ಷೆ ನೀಡಲಿದ್ದಾರೆ.
ಕಳೆದ 2 ವರ್ಷಗಳಿಂದ ಜೂನಾ ಅಖಾಡದೊಂದಿಗೆ ಸಂಪರ್ಕದಲ್ಲಿದ್ದ ಮಮತಾ, 2-3 ತಿಂಗಳಿಂದ ಕಿನ್ನರ ಅಖಾಡದೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದರು. ಇದೀಗ ಅದೇ ಅಖಾಡದ ಭಾಗವಾಗಲು ನಿರ್ಧರಿಸಿದ್ದಾರೆ.