ಸಾರಾಂಶ
ವಯನಾಡು: ಚೂರಲ್ಮಲೆಯಲ್ಲಿ ಭೂಕುಸಿತ, ಪ್ರವಾಹಕ್ಕ ಸೇತುವೆ ಕೊಚ್ಚಿಹೋಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದ್ದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ತಾತ್ಕಾಲಿಕ ಸೇತುವೆಯೊಂದನ್ನು ನಿರ್ಮಿಸಿದೆ.
ಕೇವಲ 31 ತಾಸಿನಲ್ಲಿ 190 ಅಡಿ ಉದ್ದದ ಕಬ್ಬಿಣದ ಸೇತುವೆ ನಿರ್ಮಿಸಿದೆ. ಇದನ್ನು ನಿರ್ಮಿಸಿದ್ದು ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ (ಎಂಇಜಿ) ಬೆಂಗಳೂರು ತಂಡ. ಇದರ ನೇತೃತ್ವ ವಹಿಸಿದ್ದು ತಂಡದಲ್ಲಿನ ಏಕೈಕ ಮಹಿಳಾ ಅಧಿಕಾರಿ ಮೇಜರ್ ಸೀತಾ ಶೆಲ್ಕೆ. ಕಷ್ಟ ಪರಿಸ್ಥಿತಿಯಲ್ಲಿ ಧೈರ್ಯದಿಂದ ತಂಡ ಮುನ್ನಡೆಸಿದ ಮಹಿಳಾ ಅಧಿಕಾರಿ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ವಯನಾಡಲ್ಲಿ ರಡಾರ್ಗೆ ಸಿಕ್ತು ಉಸಿರಾಟದ ಸಿಗ್ನಲ್!
ವಯನಾಡು: ಕಂಡು ಕೇಳರಿಯದ ಭೂಕುಸಿತಕ್ಕೆ ಒಳಗಾಗಿರುವ ಕೇರಳದ ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಮುಂಡಕ್ಕೈನಲ್ಲಿ ಬದುಕುಳಿದಿರಬಹುದಾದ ಜನರ ಪತ್ತೆಗೆ ರಡಾರ್ಗಳನ್ನು ಬಳಸಲಾಗುತ್ತಿದೆ. ಅದೃಷ್ಟವಶಾತ್ ಈ ರಡಾರ್ನಲ್ಲಿ ಮಣ್ಣಿನ ಅಡಿಯಲ್ಲಿ ಉಸಿರಾಡುತ್ತಿರುವ ಸಿಗ್ನಲ್ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯದಲ್ಲಿರುವ ಅಧಿಕಾರಿಯೊಬ್ಬರು ಮಾತನಾಡಿ, ‘2-3 ಮೀಟರ್ ಮಣ್ಣಿನ ಅಡಿಯಲ್ಲಿ ಉಸಿರಾಡುತ್ತಿರುವ ಪ್ರಖರವಾದ ಸೂಚನೆಗಳು ‘ಬ್ಲೂ ಸಿಗ್ನಲ್’ಗಳು ಪತ್ತೆಯಾಗಿವೆ. ಆದರೆ ಇದು ಮನುಷ್ಯರ ಉಸಿರಾಟವೋ ಅಥವಾ ಯಾವುದಾದರೂ ಪ್ರಾಣಿಯದ್ದೋ ಎಂದು ತಿಳಿದುಬಂದಿಲ್ಲ. ಈ ಸಿಗ್ನಲ್ ಪತ್ತೆಯಾದ ಸ್ಥಳದಲ್ಲಿ ಅಗೆಯುವ ಕೆಲಸಗಳು ಶುರುವಾಗಿದೆ. ಇಲ್ಲಿನ ಸ್ಥಳೀಯರ ಪ್ರಕಾರ ಮಣ್ಣು ಮುಚ್ಚಿರುವ ಸ್ಥಳದಲ್ಲಿ ಹಿಂದೆ ಮನೆ ಇತ್ತು. ಸಿಗ್ನಲ್ ಸಿಕ್ಕಿರುವ ಸ್ಥಳದಲ್ಲಿ ಅಡುಗೆ ಮನೆ ಹಾಗೂ ಉಗ್ರಾಣ ಇತ್ತು ಎಂದು ಹೇಳುತ್ತಿದ್ದಾರೆ.