ಸಾರಾಂಶ
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುವ ದಿನವೇ ಕೋಲ್ಕತಾದಲ್ಲಿ ಸಾಮರಸ್ಯ ಯಾತ್ರೆ ಮಾಡುವುದಾಗಿ ದೀದಿ ಎಂದೇ ಖ್ಯಾತರಾದ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ.
ಕೋಲ್ಕತಾ: ಜ.22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಾಗುವ ದಿನವೇ ಕೋಲ್ಕತಾದಲ್ಲಿ ‘ಸರ್ವ ಧರ್ಮ ಸಾಮರಸ್ಯ ಮೆರವಣಿಗೆ’ ಮಾಡುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಕಾಳಿಘಾಟ್ ಕಾಳಿ ಮಂದಿಕ್ಕೆ ನಾನು ಮೊದಲು ಭೇಟಿ ನೀಡಿ ಪೂಜೆ ಸಲ್ಲಿಸುವೆ. ಬಳಿಕ ನೀಡಿ ಎಲ್ಲ ಧರ್ಮೀಯರನ್ನು ಒಳಗೊಂಡು ಸಾಮರಸ್ಯ ಯಾತ್ರೆ ಆರಂಭವಾಗಲಿದೆ.
ಈ ಯಾತ್ರೆ ಮಂದಿರ, ಮಸೀದಿ, ಚರ್ಚ್ ಹೀಗೆ ಎಲ್ಲ ಕಡೆಗಳಲ್ಲೂ ತೆರಳಲಿದೆ’ ಎಂದರು. ಜೊತೆಗೆ ಇದೇ ರೀತಿ ಮೆರವಣಿಗೆಗಳನ್ನು ಎಲ್ಲ ಜಿಲ್ಲೆಗಳಲ್ಲೂ ಆಯೋಜಿಸಲು ಟಿಎಂಸಿ ಕಾರ್ಯಕರ್ತರಿಗೆ ಮನವಿ ಮಾಡಿದರು.
‘ಪ್ರಾಣ ಪ್ರತಿಷ್ಠಾಪನೆ ಮಾಡುವುದು ಪುರೋಹಿತರ ಕೆಲಸ ಹೊರತು ರಾಜಕಾರಣಿಗಳದ್ದಲ್ಲ. ರಾಜಕಾರಣಿಗಳು ಕೇವಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.