ಪಾಕ್‌ನಷ್ಟು ಪ್ರೀತಿ ತೋರುವ ದೇಶ ನಾನು ನೋಡಿಲ್ಲ: ಮಣಿಶಂಕರ್ ಅಯ್ಯರ್‌

| Published : Feb 12 2024, 01:30 AM IST / Updated: Feb 12 2024, 09:07 AM IST

manishankar aiyyar

ಸಾರಾಂಶ

ಪಾಕಿಗಳು ಭಾರತದ ಅತಿದೊಡ್ಡ ಆಸ್ತಿಯಾಗಿದ್ದು, ಮೋದಿ ಸರ್ಕಾರ ಉಭಯ ದೇಶಗಳ ನಡುವೆ ದ್ವೇಷ ಸೃಷ್ಟಿಸಿದೆ ಎಂದು ಕಾಂಗ್ರೆಸ್‌ ನಾಯಕ ಮಣಿಶಂಕರ್ ಅಯ್ಯರ್‌ ತಿಳಿಸಿದ್ದಾರೆ.

ಲಾಹೋರ್‌: ‘ಪಾಕಿಸ್ತಾನೀಯರು ಭಾರತದ ಅತಿದೊಡ್ಡ ಆಸ್ತಿ. ಭಾರತೀಯರು ಸ್ನೇಹಶೀಲರಾಗಿದ್ದರೆ ಪಾಕಿಸ್ತಾನೀಯರು ಇನ್ನೂ ಹೆಚ್ಚು ಸ್ನೇಹಶೀಲರಾಗಿರುತ್ತಾರೆ. 

ಪಾಕಿಸ್ತಾನದಷ್ಟು ಪ್ರೀತಿ ತೋರುವ ಇನ್ನಾವುದೇ ದೇಶವನ್ನು ನಾನು ನೋಡಿಲ್ಲ’ ಎಂದು ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮಣಿಶಂಕರ್‌ ಅಯ್ಯರ್‌ ಹೊಗಳಿದ್ದಾರೆ.

‘ನನ್ನ ಅನುಭವದಲ್ಲಿ ಹೇಳುವುದಾದರೆ ಪಾಕಿಸ್ತಾನೀಯರು ಎಲ್ಲದಕ್ಕೂ ಅತಿಯಾಗಿ ಪ್ರತಿಕ್ರಿಯೆ ನೀಡುತ್ತಾರೆ. ನಾವು ಸ್ನೇಹಶೀಲರಾಗಿದ್ದರೆ ಅವರು ಅತಿ ಸ್ನೇಹಶೀಲರಾಗಿರುತ್ತಾರೆ. 

ನಾವು ತಿರುಗಿನಿಂತರೆ ಅವರು ಇನ್ನೂ ತೀಕ್ಷ್ಣವಾಗಿ ತಿರುಗಿ ನಿಲ್ಲುತ್ತಾರೆ. ಅದೇನೇ ಇದ್ದರೂ ಪಾಕಿಸ್ತಾನೀಯರು ಭಾರತಕ್ಕೆ ಪಾಕಿಸ್ತಾನದಲ್ಲಿರುವ ಅತಿದೊಡ್ಡ ಆಸ್ತಿ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನದ ಅಲ್ಹಾಮ್ರಾದಲ್ಲಿ ನಡೆದ ಫೈಜ್‌ ಉತ್ಸವದಲ್ಲಿ ಇತ್ತೀಚೆಗೆ ಮಾತನಾಡಿದ ಅವರು, ‘ನಾನು ಈ ಹಿಂದೆ ಪಾಕಿಸ್ತಾನದಲ್ಲಿ ಭಾರತದ ಕಾನ್ಸುಲ್‌ ಜನರಲ್‌ ಆಗಿ ಕೆಲಸ ಮಾಡಿದ್ದೆ. 

ಆಗ ಪಾಕಿಸ್ತಾನೀಯರು ನನ್ನನ್ನೂ ನನ್ನ ಪತ್ನಿಯನ್ನೂ ಮುಕ್ತವಾಗಿ ಸ್ವಾಗತಿಸಿ ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದರು. ಹೀಗಾಗಿ ಭಾರತ-ಪಾಕಿಸ್ತಾನದ ನಡುವೆ ವಿಶ್ವಾಸ ಮೂಡಿಸುವ ಅಗತ್ಯವಿದೆ. 

ಆದರೆ ಕಳೆದ 10 ವರ್ಷಗಳ ನರೇಂದ್ರ ಮೋದಿ ಆಡಳಿತವು ವಿಶ್ವಾಸದ ಬದಲು ದ್ವೇಷ ಮೂಡಿಸಿದೆ’ ಎಂದು ಆರೋಪಿಸಿದ್ದಾರೆ.‘

ಪಾಕಿಸ್ತಾನ ಹೇಗೆ ಇಸ್ಲಾಮಿಕ್‌ ಗಣರಾಜ್ಯವಾಗಿದೆಯೋ ಹಾಗೆಯೇ ಭಾರತವನ್ನು ಹಿಂದುತ್ವದ ಗಣರಾಜ್ಯವನ್ನಾಗಿ ಮಾಡುವ ಪ್ರಯತ್ನ ಇತ್ತೀಚಿನ ವರ್ಷಗಳಲ್ಲಿ ನಡೆದಿದೆ. 

ಇದು ತಪ್ಪು. ಪಾಕಿಸ್ತಾನದ ರಚನೆಯ ಕಾಲದಲ್ಲೇ ನೆಹರು ಹಾಗೂ ಗಾಂಧೀಜಿಯವರು ಭಾರತವನ್ನು ಧರ್ಮದ ಆಧಾರದ ಮೇಲೆ ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು’ ಎಂದು ತಿಳಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಮಣಿಶಂಕರ್‌ ಅಯ್ಯರ್‌ ಅವರು ತಮ್ಮ ಪುಸ್ತಕದಲ್ಲಿ ಪಾಕಿಸ್ತಾನವನ್ನು ಹೊಗಳಿದ್ದು ತೀವ್ರ ವಿವಾದವಾಗಿತ್ತು.