ಸಾರಾಂಶ
: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ಕೇರಳದ ಮುಂಡಕ್ಕೈ ಮತ್ತು ಚೂರಲ್ಮಲೆ ಪಟ್ಟಣಗಳು ಈಗ ಕಂಡು ಕೇಳರಿಯದ ಭೂಕುಸಿತದ ಕಾರಣ ಪ್ರಳಯದ ದರ್ಶನ ಮಾಡಿಸುತ್ತಿವೆ.
ವಯನಾಡು: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ಕೇರಳದ ಮುಂಡಕ್ಕೈ ಮತ್ತು ಚೂರಲ್ಮಲೆ ಪಟ್ಟಣಗಳು ಈಗ ಕಂಡು ಕೇಳರಿಯದ ಭೂಕುಸಿತದ ಕಾರಣ ಪ್ರಳಯದ ದರ್ಶನ ಮಾಡಿಸುತ್ತಿವೆ.
ಯಾವಾಗಲೂ ಜನರಿಂದ ತುಂಬಿರುತ್ತಿದ್ದ ಮುಂಡಕ್ಕೈಯಲ್ಲೀಗ ನೆಲಸಮವಾದ ಕಟ್ಟಡಗಳು, ಕೆಸರು ತುಂಬಿದ ಗುಂಡಿಗಳು ಮತ್ತು ಬೃಹತ್ ಬಂಡಗಳೇ ಕಾಣುತ್ತಿವೆ.ಇನ್ನು ತನ್ನ ಪ್ರಾಕೃತಿಕ ಸೌಂದರ್ಯ, ಸೂಚಿಪ್ಪಾರ ಜಲಪಾತ, ವೆಲ್ಲೋಲಿಪ್ಪಾರ ಹಾಗೂ ಸೀತಾ ಜಲಪಾತಗಳಿಗೇ ಹೆಸರುವಾಸಿಯಾಗಿದ್ದ ಚೂರಲ್ಮಲೆ ತನ್ನ ಸೌಂದರ್ಯ ಕಳೆದುಕೊಂಡಿದೆ. ಅವಶೇಷಗಳ ಅಡಿಯಲ್ಲಿ ಜನ ತಮ್ಮ ಪ್ರೀತಿಪಾತ್ರರನ್ನು ಅರಸುತ್ತ ಪ್ರಾಣ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
‘450-500 ಮನೆಗಳಿದ್ದ ಮುಂಡಕ್ಕೈಯಲ್ಲೀಗ 34-49 ಮನೆಗಳಷ್ಟೇ ಉಳಿದಿದ್ದು, ಈ ಪ್ರದೇಶವೀಗ ಕೇರಳದ ಭೂಪಟದಿಂದಲೇ ಮಾಯವಾಗಿದೆ’ ಎಂದು ಅಲ್ಲಿನ ಜನ ಬೇಸರ ಹಾಗೂ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.ಬೆಂಗಳೂರಿನ ಪ್ರವಾಸಿಗಳ ಪಾಲಿಗೆ ಮುಂಡಕ್ಕೈ ಮತ್ತು ಚೂರಲ್ಮಲೆ ನೆಚ್ಚಿನ ತಾಣವಾಗಿದ್ದವು. ಕೆಲ ದಿನಗಳಿಂದ ಅಲ್ಲಿನ ರೆಸಾರ್ಟ್ಗಳು ಮುಚ್ಚಿದ್ದ ಕಾರಣ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಇದರಿಂದಾಗಿ ಅಪಾರ ಪ್ರಮಾಣದ ಪ್ರಾಣಹಾನಿ ತಪ್ಪಿದೆ.