ಸಾರಾಂಶ
ಶ್ರೀನಗರ : ಪಹಲ್ಗಾಂ ಉಗ್ರ ದಾಳಿಯಲ್ಲಿ ಮೃತರಾದ ಕನ್ನಡಿಗ ಮಂಜುನಾಥ್ ಸೇರಿದಂತೆ 26 ನಾಗರಿಕರ ಸ್ಮರಣಾರ್ಥ ಸ್ಮಾರಕವನ್ನು ಸ್ಥಾಪಿಸುವುದಾಗಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಘೋಷಿಸಿದ್ದಾರೆ. ಸೋಮವಾರ ಪಹಲ್ಗಾಂನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸ್ಮಾರಕ ನಿರ್ಮಾಣದ ಕೆಲಸ ಪ್ರಾರಂಭಿಸುವಂತೆ ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
‘ಸ್ಮಾರಕವು ಭವ್ಯವಾಗಿರುವುದಲ್ಲದೆ, ಘನತೆ ಮತ್ತು ಗೌರವಾನ್ವಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಲಹೆಗಳನ್ನು ಪಡೆಯಲಾಗುವುದು. ಪಹಲ್ಗಾಂ ದಾಳಿ ಬಳಿಕ ನೆಲ ಕಚ್ಚಿರುವ ಕಾಶ್ಮೀರದ ಪ್ರವಾಸೋದ್ಯಮವನ್ನು ಪುನಃ ಮೇಲೆತ್ತಲು ಪ್ರವಾಸಿಗರೊಂದಿಗೆ ಪಾರದರ್ಶಕ ಮತ್ತು ಮುಕ್ತ ಸಂವಹನ ಅಗತ್ಯ’ ಎಂದರು.
ಪಾಕ್ ಗಡಿಯ 4 ರಾಜ್ಯಗಳಲ್ಲಿ ಇಂದು ಮಾಕ್ ಡ್ರಿಲ್
ನವದೆಹಲಿ: ಪಾಕಿಸ್ತಾನದ ಗಡಿಯಲ್ಲಿರುವ ರಾಜ್ಯಗಳಾದ ಗುಜರಾತ್, ಪಂಜಾಬ್, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ನಾಗರಿಕ ರಕ್ಷಣಾ ಅಣಕು ಕವಾಯತು (ಮಾಕ್ ಡ್ರಿಲ್) ನಡೆಯಲಿದೆ. ಸಂಭಾವ್ಯ ಉಗ್ರ ದಾಳಿಯ ವಿರುದ್ಧ ನಾಗರಿಕರು ಸನ್ನದ್ಧರಾಗಿರುವಂತೆ ಮಾಡಲು ಮತ್ತು ದಾಳಿ ವೇಳೆ ಪ್ರತಿದಾಳಿ ತಂತ್ರಗಳನ್ನು ಕಲಿಸಲು ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ಪಾಕ್ ಗಡಿಯಲ್ಲಿ ಉಗ್ರರ ಒಳನುಸುಳುವಿಕೆ ಪ್ರಯತ್ನಗಳು ವರದಿಯಾದ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ಆಪರೇಷನ್ ಸಿಂದೂರ್ಗೂ ಮೊದಲು ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಇದೇ ರೀತಿಯ ಮಾಕ್ ಡ್ರಿಲ್ ನಡೆದಿತ್ತು.
ಕದನ ವಿರಾಮಕ್ಕಾಗಿ 2 ಬಾರಿ ಭಾರತಕ್ಕೆ ಪಾಕಿಸ್ತಾನ ಮೊರೆ!
ನವದೆಹಲಿ: ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತ ಕೈಗೊಂಡ ಆಪರೇಷನ್ ಸಿಂದೂರ್ನಿಂದ ತತ್ತರಿಸಿದ್ದ ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ 2 ಬಾರಿ ಭಾರತಕ್ಕೆ ಮೊರೆಯಿಟ್ಟಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಮೇ 6ರ ಮಧ್ಯರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ 9 ಉಗ್ರನೆಲೆಗಳನ್ನು ಭಾರತ ಧ್ವಂಸ ಮಾಡಿದ ಮರುದಿನವೇ ಪಾಕ್ ಕದನ ವಿರಾಮಕ್ಕೆ ಮೊರೆಯಿಟ್ಟತ್ತು. ಮೇ 7ರ ಸಂಜೆ ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಒ) ದಾಳಿಯನ್ನು ನಿಲ್ಲಿಸುವಂತೆ ಭಾರತಕ್ಕೆ ಔಪಚಾರಿಕ ಸಂದೇಶ ಕಳಿಸಿದ್ದರು. ಆದರೆ ಇದರ ಹೊರತಾಗಿಯೂ ಭಾರತದ ಮೇಲೆ ಪಾಕ್ ದಾಳಿ ಮುಂದುವರೆದಿತ್ತು. ಇದು ಪಾಕ್ ಮಾತನ್ನು ನಂಬಲು ಸಾಧ್ಯವಿಲ್ಲ ಎಂದು ಭಾರತೀಯ ಸೇನೆಗೆ ಮನವರಿಕ ಮಾಡಿಕೊಟ್ಟಿತ್ತು.
ಹೀಗಾಗಿ ಮತ್ತೆ 3 ದಿನ ಕದನ ಮುಂದುವರೆಯಿತು. ಅಂತಿಮವಾಗಿ ಮೇ 10ರ ಮಧ್ಯಾಹ್ನ 3:35ಕ್ಕೆ ಎರಡೂ ದೇಶಗಳ ಡಿಜಿಎಂಒಗಳು ಮಾತುಕತೆ ನಡೆಸಿದ್ದರು. ಆ ವೇಳೆಯೂ ಪಾಕ್ ಡಿಜಿಎಂಒ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಮನವಿ ಮಾಡಿದ್ದರು. ಬಳಿಕ ಪಾಕ್ ಪ್ರಸ್ತಾಪವನ್ನು ಭಾರತ ಒಪ್ಪಿತು ಎಂದು ಮೂಲಗಳು ತಿಳಿಸಿವೆ.ಇದೇ ವೇಳೆ ಭಾರತ ನಡೆಸಿದ ವೈಮಾನಿಕ ದಾಳಿಗೆ ಪಾಕ್ ಕಡೆ 160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದೂ ಮೂಲಗಳು ತಿಳಿಸಿವೆ.