ಸಾರಾಂಶ
ಯೋಗ ಗುರು ಬಾಬಾ ರಾಮದೇವ್, ಅವರ ಆಪ್ತ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ ಸಂಸ್ಥೆ ವಿರುದ್ಧ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಡಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.
ನವದೆಹಲಿ: ಯೋಗ ಗುರು ಬಾಬಾ ರಾಮದೇವ್, ಅವರ ಆಪ್ತ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ ಸಂಸ್ಥೆ ವಿರುದ್ಧ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಡಲು ಸುಪ್ರೀಂಕೋರ್ಟ್ ಸಮ್ಮತಿಸಿದೆ. ಪ್ರಕರಣ ಸಂಬಂಧ ಆರೋಪಿಗಳು ಸಲ್ಲಿಸಿದ ಕ್ಷಮಾಪಣೆ ಮನ್ನಿಸಿ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ.
ಕೋವಿಡ್ ವೇಳೆ ಪತಂಜಲಿ ಸಂಸ್ಥೆ, ಅಲೋಪತಿ ಚಿಕಿತ್ಸೆ ಬಗ್ಗೆ ನೀಡಿದ್ದ ಜಾಹೀರಾತು ಮಾನಹಾನಿಕರವಾಗಿದೆ. ಅಲೋಪತಿ ವೈದ್ಯ ಪದ್ಧತಿಯನ್ನು ಅವಮಾನಿಸುವಂತಿದೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ದೂರು ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆ ವೇಳೆ ಜಾಹೀರಾತು ಹಿಂಪಡೆಯಲಾಗುವುದು ಎಂದು ಹೇಳಿದ್ದ ಪತಂಜಲಿ ಸಂಸ್ಥೆ ಅದರಂತೆ ನಡೆದುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಸ್ವಯಂ ನ್ಯಾಯಾಂಗ ನಿಂದನಾ ಕೇಸು ದಾಖಲಿಸಿಕೊಂಡಿತ್ತು.ಆದರೆ ಬಳಿಕ ಕೋರ್ಟ್ಗೆ ಖುದ್ದು ಹಾಜರಾಗಿದ್ದ ರಾಮದೇವ್ ಹಾಗೂ ಬಾಲಕೃಷ್ಣ ಕ್ಷಮೆ ಕೇಳಿದ್ದರು ಹಾಗೂ ಕೋರ್ಟ್ ಸೂಚನೆಯಂತೆ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಬಹಿರಂಗ ಕ್ಷಮೆ ಕೇಳಿದ್ದರು. ಹೀಗಾಗಿ ನಿಂದನಾ ಪ್ರಕರಣ ಕೈಬಿಡಲಾಗಿದೆ.