ಮಹಾರಾಷ್ಟ್ರದ ಲಾತೂರ್‌ನ 100ಕ್ಕೂ ಹೆಚ್ಚು ಜನರಿಗೆ ವಕ್ಫ್‌ ನ್ಯಾಯಾಧಿಕರಣ ನೋಟಿಸ್‌

| Published : Dec 08 2024, 01:18 AM IST / Updated: Dec 08 2024, 05:48 AM IST

ಸಾರಾಂಶ

ದೇಶಾದ್ಯಂತ ವಕ್ಫ್‌ ಗಲಾಟೆ ಸುದ್ದಿಯಾಗುತ್ತಿರುವ ನಡುವೆಯೇ ಶನಿವಾರ ಮಹಾರಾಷ್ಟ್ರದ ಲಾತೂರ್‌ನ 100ಕ್ಕೂ ಹೆಚ್ಚು ಜನರಿಗೆ ಮಹಾರಾಷ್ಟ್ರ ವಕ್ಫ್‌ ನ್ಯಾಯಾಧಿಕರಣ ನೋಟಿಸ್‌ ನೀಡಿದೆ.

ಲಾತೂರ್‌ (ಮಹಾರಾಷ್ಟ್ರ): ದೇಶಾದ್ಯಂತ ವಕ್ಫ್‌ ಗಲಾಟೆ ಸುದ್ದಿಯಾಗುತ್ತಿರುವ ನಡುವೆಯೇ ಶನಿವಾರ ಮಹಾರಾಷ್ಟ್ರದ ಲಾತೂರ್‌ನ 100ಕ್ಕೂ ಹೆಚ್ಚು ಜನರಿಗೆ ಮಹಾರಾಷ್ಟ್ರ ವಕ್ಫ್‌ ನ್ಯಾಯಾಧಿಕರಣ ನೋಟಿಸ್‌ ನೀಡಿದೆ.

ಈ ನೋಟಿಸ್‌ನನ್ನು ವಕ್ಫ್‌ ಸಮಿತಿ ಕೋರಿಕೆ ಮೇರೆಗೆ ಛತ್ರಪತಿ ಸಂಭಾಜಿನಗರದಲ್ಲಿರುವ ವಕ್ಫ್‌ ನ್ಯಾಯಮಂಡಳಿ ನೀಡಿದ್ದು, 103 ರೈತರಿಗೆ ಸೇರಿರುವ 300 ಎಕರೆಗೂ ಹೆಚ್ಚು ಭೂಮಿ ತನ್ನದೆಂದು ಹೇಳಿದೆ. ಹೀಗಾಗಿ ಕೃಷಿ ಭೂಮಿಯನ್ನು ಹಿಂತಿರುಗಿಸುವಂತೆ ನೋಟಿಸ್‌ ನೀಡಿದೆ ಎಂದು ರೈತರು ಹೇಳಿದ್ದಾರೆ. ನೋಟಿಸ್‌ ಸಂಬಂಧ ನ್ಯಾಯಾಲಯದಲ್ಲಿ 2 ವಿಚಾರಣೆ ನಡೆದಿದ್ದು, ಮುಂದಿನ ವಿಚಾರಣೆ ಡಿ.20ರಂದ ಇದೆ.

ರೈತರೊಬ್ಬರು ಮಾತನಾಡಿ, ನಮ್ಮ ಹಿಂದಿನ ತಲೆಮಾರಿನಿಂದಲೂ ಇಲ್ಲಿ ಕೃಷಿ ಮಾಡುತ್ತಿದ್ದೇವೆ. ಇದು ವಕ್ಫ್‌ ಆಸ್ತಿಯಲ್ಲ ಎಂದು ಹೇಳಿದ್ದಾರೆ.

ವಕ್ಫ್‌ ವಿಷಯದಲ್ಲಿ ಮುಸ್ಲಿಮರ ಬೆಂಬಲಿಸಿ: ಕ್ರೈಸ್ತರಿಗೆ ಕ್ರೈಸ್ತ ವಿಪಕ್ಷ ಸಂಸದರ ಕರೆ

ನವದೆಹಲಿ: ‘ವಕ್ಫ್‌ ವಿಷಯದಲ್ಲಿ ಕ್ರಿಶ್ಚಿಯನ್ನರು ಮುಸ್ಲಿಮರನ್ನು ಬೆಂಬಲಿಸಬೇಕು. ಕಾರಣ, ಇದು ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಪರಿಣಾಮ ಬೀರಬಲ್ಲ ವಿಷಯ’ ಎಂದು ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್‌ನಲ್ಲಿ ವಿಪಕ್ಷದ ಕ್ರೈಸ್ತ ಸಂಸದರು ಕ್ರಿಶ್ಚಿಯನ್ನರಿಗೆ ಕರೆ ನೀಡಿದ್ದಾರೆ.ದೆಹಲಿಯಲ್ಲಿ ನಡೆದ ಈ ಸಭೆಯಲ್ಲಿ ಟಿಎಂಸಿಯ ಡೆರೆಕ್‌ ಓ''''''''ಬ್ರಿಯಾನ್, ಕಾಂಗ್ರೆಸ್‌ ಸಂಸದರಾದ ಹಿಬಿ ಎಡೆನ್‌, ಡೀನ್‌ ಕುರಿಯಾಕೋಸ್‌, ಆಂಟೋ ಆಂಟನಿ, ಸಿಪಿಐ(ಎಂ)ನ ಜಾನ್‌ ಬ್ರಿಟ್ಟಾಸ್‌, ಕೇಂದ್ರ ಸಚಿವ ಜಾರ್ಜ್‌ ಕುರಿಯನ್‌ ಭಾಗವಹಿಸಿದ್ದರು.

ಕೇರಳದ ಹಲವು ಚರ್ಚ್‌ಗಳನ್ನು ವಕ್ಫ್‌ ತನ್ನ ಆಸ್ತಿ ಎಂದು ಘೋಷಿಸಿಕೊಂಡಿರುವ ಕಾರಣ ರಾಜ್ಯದ ಕ್ರಿಶ್ಚಿಯನ್ನರು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆಯೇ ಈ ಬೆಳವಣಿಗೆಯಾಗಿರುವುದ ಗಮನಾರ್ಹ.