ಸಾರಾಂಶ
ನವದೆಹಲಿ : ಸತತ 3ನೇ ಬಾರಿ ಪ್ರಧಾನಿ ಆಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಪಕ್ಷ ‘ನರೇಂದ್ರ ಡಿಸ್ಟ್ರಕ್ಟಿವ್ ಅಲಯನ್ಸ್’ನ ನಾಯಕ ಎಂದು ಟೀಕಿಸಿದೆ. ಅರ್ಥಾತ್ ಅವರೊಬ್ಬ ವಿಧ್ವಂಸಕ ಮೈತ್ರಿಕೂಟದ ನಾಯಕ ಎಂದು ಕಿಡಿಕಾರಿದೆ.
ಭಾನುವಾರ ಟ್ವೀಟ್ ಮಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಮೋದಿ ಈ ಹಿಂದೆ ಅನೇಕ ವಿವಾದಗಳನ್ನು ಸೃಷ್ಟಿಸಿದವರು. ಅವರು ಯಾವತ್ತು ಸೆಂಗೋಲ್ ಹಿಡಿದು ಹೊಸ ಸಂಸತ್ತು ಪ್ರವೇಶಿಸಿದರೋ ಸೆಂಗೋಲ್ಗೆ ಇದ್ದ ಇತಿಹಾಸ ತಿರುಚಲು ಯತ್ನಿಸಿದರು ಹಾಗೂ ಸೆಂಗೋಲ್ನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ತಮಿಳರನ್ನು ಅವಮಾನಿಸಿದರು. ಇಂಥ ಸಂವಿಧಾನ ವಿರೋಧಿ ಕೆಲಸ ಮಾಡಿದ್ದಕ್ಕೇ ಇತ್ತೀಚಿನ ಚುನಾವಣೆಯಲ್ಲಿ ಭಾರಿ ವೈಯಕ್ತಿಕ, ನೈತಿಕ ಹಾಗೂ ರಾಜಕೀಯ ಸೋಲು ಕಂಡಿದ್ದಾರೆ. ಜನರು ಅವರ ಆಡಂಬರ ತಿರಸ್ಕರಿಸಿದ್ದಾರೆ. ಹೀಗಾಗಿ ಈಗ ಸಂವಿಧಾನಕ್ಕೆ ಹಣೆಯೊತ್ತಿ ನಮಿಸುವ ನಾಟಕ ಆಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.
‘ತಾನು ಮೂರನೇ ಒಂದರ ಪ್ರಧಾನ ಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದ ಮೋದಿಗೆ ಈಗ ವೈಯಕ್ತಿಕವಾಗಿ ಬಹುಮತವೂ ಬಂದಿಲ್ಲ. ಹೀಗಾಗಿ ಅವರು ಪ್ರಧಾನಿ ಆಗಲು ಕಾನೂನುಬದ್ಧತೆಯ ಕೊರತೆ ಇದೆ’ ಎಂದು ಜೈರಾಂ ಟೀಕಿಸಿದ್ದಾರೆ.