ಕರ್ನಾಟಕ ಮುಸ್ಲಿಂ ಮೀಸಲು ಬಗ್ಗೆ ಕೇಂದ್ರ ಆಯೋಗದ ಕಿಡಿ

| Published : Apr 24 2024, 02:16 AM IST

ಸಾರಾಂಶ

ಮೀಸಲು ನೀಡುವ ಸಲುವಾಗಿ ಇಡೀ ಮುಸ್ಲಿಂ ಸಮುದಾಯವನ್ನು ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಿದ ಕರ್ನಾಟಕ ಸರ್ಕಾರದ ಕ್ರಮವನ್ನು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಕಟುವಾಗಿ ಟೀಕಿಸಿದೆ.

ಪಿಟಿಐ ನವದೆಹಲಿ

ಮೀಸಲು ನೀಡುವ ಸಲುವಾಗಿ ಇಡೀ ಮುಸ್ಲಿಂ ಸಮುದಾಯವನ್ನು ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಿದ ಕರ್ನಾಟಕ ಸರ್ಕಾರದ ಕ್ರಮವನ್ನು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಕಟುವಾಗಿ ಟೀಕಿಸಿದೆ. ಇಂಥ ಕ್ರಮಗಳು ಸಾಮಾಜಿಕ ನ್ಯಾಯ ಪರಿಕಲ್ಪನೆಯ ತತ್ವಗಳನ್ನು ದುರ್ಬಲಗೊಳಿಸುತ್ತವೆ ಎಂದು ಅದು ಆಕ್ಷೇಪ ವ್ಯಕ್ತಪಡಿಸಿದೆ.

ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಮತ್ತು ಸರ್ಕಾರಿ ಉದ್ಯೋಗದಲ್ಲಿ ನೇಮಕದ ವೇಳೆ ಮೀಸಲು ನೀಡುವ ಸಲುವಾಗಿ ಕರ್ನಾಟಕದ ವ್ಯಾಪ್ತಿಯ ಮುಸ್ಲಿಂ ಧರ್ಮದ ಒಳಗಿನ ಎಲ್ಲಾ ಜಾತಿ/ ಸಮುದಾಯಗಳನ್ನು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಎಂದು ಪರಿಗಣಿಸಲಾಗಿದೆ. ಜೊತೆಗೆ ರಾಜ್ಯದ ಹಿಂದುಗಳಿದ ವರ್ಗಗಳ ಪಟ್ಟಿಯಲ್ಲಿ ಮುಸ್ಲಿಮರನ್ನು ಪ್ರತ್ಯೇಕವಾಗಿ 2ಬಿ ವರ್ಗದಲ್ಲಿ ಸೇರಿಸಲಾಗಿದೆ. ಹೀಗೆ ಪ್ರತ್ಯೇಕ ವಿಭಾಗ ಮಾಡಿದ ಪರಿಣಾಮ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ 17 ಜಾತಿಗಳಿಗೆ ಪ್ರವರ್ಗ 1ರಲ್ಲಿ ಮತ್ತು 19 ಜಾತಿಗಳಿಗೆ ಎ-2 ಪ್ರವರ್ಗದಲ್ಲಿ ಮೀಸಲು ಸೌಲಭ್ಯ ಸಿಗಲಿದೆ. ಆದರೆ ಎಲ್ಲಾ ಮುಸ್ಲಿಂ ಧರ್ಮವನ್ನು ಹೀಗೆ ಹಿಂದುಳಿದ ವಿಭಾಗಕ್ಕೆ ಏಕಪಕ್ಷೀಯವಾಗಿ ಸೇರ್ಪಡೆ ಮಾಡಿದ್ದು ಸಾಮಾಜಿಕ ನ್ಯಾಯದ ತತ್ವಗಳನ್ನು ದುರ್ಬಲಗೊಳಿಸುತ್ತದೆ. ಅದರಲ್ಲೂ ವಿಶೇಷವಾಗಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರು ಎಂದು ಗುರುತಿಸಲಾದ ಕಡೆಗಣಿಸಲ್ಪಟ್ಟ ಮುಸ್ಲಿಂ ಧರ್ಮದ ಒಳಗಿನ ವಿವಿಧ ಜಾತಿ ಮತ್ತು ಸಮುದಾಯಗಳಿಗೆ ಅನ್ಯಾಯ ಉಂಟು ಮಾಡುತ್ತದೆ ಎಂದು ಆಯೋಗ ಹೇಳಿಕೆ ಬಿಡುಗಡೆ ಮಾಡಿದೆ.ಅಲ್ಲದೆ ಇಂಥ ಮೀಸಲು ನಿರ್ಧಾರವು ಒಟ್ಟಾರೆ ಸಾಮಾಜಿಕ ನ್ಯಾಯದ ಚೌಕಟ್ಟು ಅದರಲ್ಲೂ ವಿಶೇಷವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ಆಯೋಗ ಕಳವಳ ವ್ಯಕ್ತಪಡಿಸಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಸ್ಲಿಮರು ಸೇರಿದಂತೆ ಹಿಂದುಳಿದ ವರ್ಗಕ್ಕೆ ಶೇ.32ರಷ್ಟು ಮೀಸಲು ಕಲ್ಪಿಸಲಾಗಿದೆ. ಈ ಮೀಸಲು ಜಾರಿ ವೇಳೆ ವೈವಿಧ್ಯಮಯ ಸಮುದಾಯಗಳಿಗೆ ಪ್ರಾತಿನಿಧ್ಯ ಖಚಿತಪಡಿಸಿಕೊಳ್ಳಬೇಕಿದೆ ಎಂದು ಆಯೋಗ ಒತ್ತಿಹೇಳಿದೆ.