ಸಾರಾಂಶ
ದಿಲ್ಲಿ ವಿಧಾನಸಭೆಯಲ್ಲಿ ತ್ರಿಕೋನ ಕದನ ಏರ್ಪಟ್ಟಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಆಪ್- ಈ ಮೂರೂ ಪಕ್ಷಗಳು ಅಧಿಕಾರಕ್ಕೆ ಹೋರಾಡುತ್ತಿವೆ.
ನವದೆಹಲಿ: ದಿಲ್ಲಿ ವಿಧಾನಸಭೆಯಲ್ಲಿ ತ್ರಿಕೋನ ಕದನ ಏರ್ಪಟ್ಟಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಆಪ್- ಈ ಮೂರೂ ಪಕ್ಷಗಳು ಅಧಿಕಾರಕ್ಕೆ ಹೋರಾಡುತ್ತಿವೆ.
ದಿಲ್ಲಿಯಲ್ಲಿ ಆಪ್ ಈ ಸಲ ಗೆದ್ದರೆ ಹ್ಯಾಟ್ರಿಕ್ ಗೆಲುವಾಗಲಿದೆ. ಈ ಹಿಂದೆ ಸತತ 2 ಬಾರಿ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಆಪ್ ಜಯಿಸಿ ಅವರೇ ಮುಖ್ಯಮಂತ್ರಿಯಾಗಿದ್ದರು. ಆದರೆ ಈ ಸಲ ಅವರು ಮದ್ಯ ಹಗರಣದ ಕಾರಣ ಇತ್ತೀಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಆತಿಶಿ ಅವರಿಗೆ ಸಿಎಂ ಪಟ್ಟ ಕಟ್ಟಿದರು. ಆದರೆ ಈ ಸಲ ಗೆದ್ದರೆ ಮತ್ತೆ ತಾವೇ ಸಿಎಂ ಎಂದು ಅವರು ಘೋಷಿಸಿಕೊಂಡಿದ್ದಾರೆ.ಇನ್ನು ಆಪ್ ನಡೆಸಿದೆ ಎನ್ನಲಾದ ಮದ್ಯ ಹಗರಣ ಹಾಗೂ ವಿವಿಧ ಹಗರಣಗಳು, ಕೇಜ್ರಿವಾಲ್, ಮನೀಶ ಸಿಸೋಡಿಯಾರಂಥ ನಾಯಕರ ಬಂಧನವನ್ನೇ ಗುರಿಯಾಗಿಸಿಕೊಂಡು ಬಿಜೆಪಿ ಕಣಕ್ಕಿಳಿದಿದೆ. ಆಪ್ನ ಹ್ಯಾಟ್ರಿಕ್ ಗೆಲುವಿಗೆ ಭಂಗ ತರುವ ಉದ್ದೇಶ ಬಿಜೆಪಿಗೆ ಇದೆ. ಆದರೆ ಇಲ್ಲಿ ಕೇಜ್ರಿವಾಲ್ಗೆ ಸರಿಸಮನಾಗಿ ನಿಲ್ಲುವ ಬಲಶಾಲಿ ನಾಯಕ ಇಲ್ಲ. ಸಿಎಂ ಅಭ್ಯರ್ಥಿಯನ್ನೂ ಬಿಜೆಪಿ ಘೋಷಿಸಿಲ್ಲ. ಇದು ಬಿಜೆಪಿ ಮೈನಸ್ ಪಾಯಿಂಟ್.
ಕಾಂಗ್ರೆಸ್ ಈ ಸಲ ಇಂಡಿಯಾ ಕೂಟದ ಮಿತ್ರಪಕ್ಷ ಆಪ್ ಜತೆ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ಸ್ಪರ್ಧಿಸಿದೆ. ಶೀಲಾ ದೀಕ್ಷಿತ್ ಅಧಿಕಾರ ಪತನದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸತತ 2 ಸಲ ಸೋತು ಸುಣ್ಣವಾಗಿದೆ. ಹೀಗಾಗಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲಕಾ ಲಾಂಬಾ, ಶೀಲಾ ದೀಕ್ಷಿತ್ ಪುತ್ರ ಸಂದೀಪ್ ದೀಕ್ಷಿತ್ ಸೇರಿ ಅನೇಕರನ್ನು ಕಣಕ್ಕೆ ಇಳಿಸಿದ್ದು, ಅಧಿಕಾರದ ಬರವನ್ನು ದೂರ ಮಾಡಿಕೊಳ್ಳಲು ಯತ್ನಿಸುತ್ತಿದೆ.