ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2021-2021ರ ಅವಧಿಯಲ್ಲಿ ದೇಶದ ಶೇ.40ರಷ್ಟು ಸಂಪತ್ತು ಕೇವಲ ಅಗ್ರ ಶೇ.1ರಷ್ಟು ಶ್ರೀಮಂತರ ಪಾಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಈ ಮೂಲಕ ಸಂಪತ್ತಿನ ಸಮಾನ ಹಂಚಿಕೆ ಕುರಿತ ಕಾಂಗ್ರೆಸ್ನ ಚುನಾವಣಾ ಭರವಸೆ ಟೀಕಿಸಿದ ಮೋದಿಗೆ ತಿರುಗೇಟು ನೀಡಿದೆ.
ಟ್ವೀಟರ್ನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಪ್ರಧಾನಿ ಮೋದಿ 2012-21ರವರೆಗೆ ಆಸ್ತಿ ಹಂಚಿಕೆ ಕುರಿತು ಮಾತನಾಡಿಲ್ಲ. ಜಿಎಸ್ಟಿಯ ಶೇ.64ರಷ್ಟನ್ನು ಕೇವಲ ಬಡವರು ಹಾಗೂ ಮಧ್ಯಮ ವರ್ಗದವರು ಪಾವತಿಸಿದ್ದಾರೆ. ಆದರೆ ಮೋದಿ ಎಲ್ಲವನ್ನು ಶ್ರೀಮಂತರಿಗೆ ನೀಡಿದ್ದಾರೆ. ದೇಶದ 21 ಶತಕೋಟ್ಯಧೀಶರ ಆಸ್ತಿ ಉಳಿದ 70 ಕೋಟಿ ಭಾರತೀಯರ ಸಂಪತ್ತಿಗೆ ಸಮನಾಗಿದೆ.ಹೀಗಾಗಿ ದೇಶದಲ್ಲಿ ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಮಾತ್ರ ಸಮಗ್ರ ಆರ್ಥಿಕ ಸುಧಾರಣೆ ಸಾಧ್ಯ. ಹತ್ತು ವರ್ಷದ ಮೋದಿ ಆಡಳಿತದಲ್ಲಿ ಏಕಸ್ವಾಮ್ಯತೆ ಹೆಚ್ಚಾಗಿದೆ. ಹೀಗಾಗಿ ಹಣದುಬ್ಬರ ಜಾಸ್ತಿ ಆಗುತ್ತಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ’ ಎಂದು ಟ್ವೀಟರ್ನಲ್ಲಿ ಕಿಡಿಕಾರಿದ್ದಾರೆ.