ಸಾರಾಂಶ
ಕೂಚ್ ಬೆಹಾರ್ (ಬಂಗಾಳ) : ‘ಸಿಎಎ ಜಾರಿ ಬಗ್ಗೆ ವಿಪಕ್ಷಗಳೆಲ್ಲ ಸುಮ್ಮನೇ ಪುಕಾರು ಹಬ್ಬಿಸುತ್ತಿದೆ. ಆದರೆ ತಾಯಿ ಭಾರತಿ ಮೇಲೆ ನಂಬಿಕೆ ಇರುವವರಿಗೆ ಪೌರತ್ವ ನೀಡುವ ಸಿಎಎ ಎಂಬುದು ಮೋದಿ ಗ್ಯಾರಂಟಿ’ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.
ಪಶ್ಚಿಮ ಬಂಗಾಳದ ಕೋಚ್ ಬೆಹಾರ್ನಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ,‘ಇಂಡಿಯಾ ಕೂಟದ ನಾಯಕರು ಎಂದಿಗೂ ಶ್ರಮಿಕರ ಒಳಿತಿಗೆ ಸ್ಪಂದಿಸಿಲ್ಲ. ನಾವು ಈಗ ಸಿಎಎ ಜಾರಿಗೆ ತಂದಿದ್ದು, ಇದರ ಬಗ್ಗೆಯೂ ಸುಳ್ಳುಸುದ್ದಿಗಳನ್ನು ಹಬ್ಬಿಸಿ ಜನರಲ್ಲಿ ತಪ್ಪು ಅಭಿಪ್ರಾಯ ಸೃಷ್ಟಿಸುತ್ತಿದೆ. ತಾಯಿ ಭಾರತಿ ಮೇಲೆ ನಂಬಿಕೆ ಇರಿಸಿದವರಿಗೆ ಪೌರತ್ವ ನೀಡುವುದು ಮೋದಿ ಗ್ಯಾರಂಟಿ’ ಎಂದರು.
ವಿಪಕ್ಷಗಳು ಹಾಗೂ ಸಂದೇಶ್ ಖಾಲಿ ಬಗ್ಗೆ ಮಾತನಾಡಿದ ಪ್ರಧಾನಿ,‘ವಿಪಕ್ಷಗಳೆಲ್ಲ ಭ್ರಷ್ಟಾಚಾರವನ್ನು ರಕ್ಷಿಸುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ. ಆದರೆ ನಾವು ಅವರಿಗೆ ಶಿಕ್ಷೆ ಆಗುವವರೆಗೂ ಬಿಡುವುದಿಲ್ಲ. ನಮ್ಮ ಮುಂದಿನ ಅವಧಿಯಲ್ಲಿ ಭ್ರಷ್ಟರ ಶಿಕ್ಷೆಗೆ ಇನ್ನು ಕಠಿಣ ಕಾನೂನುಗಳನ್ನು ತರಲಾಗುತ್ತದೆ. ಬಂಗಾಳದಲ್ಲಿ ಸಂದೇಶ್ಖಾಲಿ ಪೀಡಕರನ್ನು ರಕ್ಷಿಸಲು ಟಿಎಂಸಿ ಸರ್ಕಾರ ಸರ್ವಪ್ರಯತ್ನಗಳನ್ನು ಮಾಡಿರುವುದನ್ನು ಇಡೀ ದೇಶವೇ ನೋಡಿದೆ. ನಾವು ಇಂಥಹವರಿಗೆ ಶಿಕ್ಷೆ ಕೊಡದೇ ಬಿಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.