ಸಾರಾಂಶ
ವಾರಕ್ಕೆ 60 ಗಂಟೆಗಿಂತ ಹೆಚ್ಚಿನ ದುಡಿಮೆಯು ಸಿಬ್ಬಂದಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆ ಹೇಳಿರುವುದು ಸಂಚಲನ ಮೂಡಿಸಿದೆ.
ನವದೆಹಲಿ: ವಾರಕ್ಕೆ 60ರಿಂದ 90 ಗಂಟೆ ಕೆಲಸ ಮಾಡುವ ಅಗತ್ಯದ ಬಗ್ಗೆ ಇನ್ಫೋಸಿಸ್ನ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಮತ್ತು ಎಲ್ ಆ್ಯಂಡ್ ಟಿ ಅಧ್ಯಕ್ಷ ಸುಬ್ರಹ್ಮಣ್ಯಂ ಅವರ ಸಲಹೆ ಕುರಿತು ದೇಶವ್ಯಾಪಿ ಚರ್ಚೆ ನಡೆದ ಬೆನ್ನಲ್ಲೇ, ವಾರಕ್ಕೆ 60 ಗಂಟೆಗಿಂತ ಹೆಚ್ಚಿನ ದುಡಿಮೆಯು ಸಿಬ್ಬಂದಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆ ಹೇಳಿರುವುದು ಸಂಚಲನ ಮೂಡಿಸಿದೆ.
ಆದರೆ ಇಂಥದ್ದೊಂದು ಅಭಿಪ್ರಾಯದ ಜೊತೆಜೊತೆಗೇ, ದೇಶದ ಕಾರ್ಮಿಕ ಕಾನೂನುಗಳು ಗರಿಷ್ಠ ಕೆಲಸ ಅವಧಿಗೆ ಹೊಂದಿರುವ ಬಿಗಿ ನಿಯಮಗಳ ಬಗ್ಗೆ ಆಕ್ಷೇಪವನ್ನೂ ವ್ಯಕ್ತಪಡಿಸಿದೆ. ಇಂಥ ಬಿಗಿ ನಿಯಮಗಳು ಉದ್ಯಮಗಳ ಬೆಳವಣಿಗೆ ಮತ್ತು ವೈಯಕ್ತಿಕವಾಗಿ ಸಿಬ್ಬಂದಿ ಬೆಳವಣಿಗೆಗೂ ಅಡ್ಡಿಯಾಗಿದೆ ಎಂದು ಹೇಳಿದೆ. ಇಂಥ ಎರಡು ಅಭಿಪ್ರಾಯಗಳು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷಾ ವರದಿಯಲ್ಲಿದೆ.
ಆರೋಗ್ಯಕ್ಕೆ ಹಾನಿಕರ:
ಉತ್ಪಾದಕತೆಯ ಹೆಸರಲ್ಲಿ ಕಚೇರಿಗಳಲ್ಲಿ ಸುದೀರ್ಘ ಅವಧಿಗೆ ಕೆಲಸ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ನಿತ್ಯವೂ ಕುಳಿತಲ್ಲೇ 12 ತಾಸಿಗಿಂತ ಅಧಿಕ ಕೆಲಸ ಮಾಡುವುದು ಮಾನಸಿಕ ಸ್ವಾಸ್ಥ್ಯಕ್ಕೆ ಅಪಾಯಕಾರಿ ಎಂದು ಹಲವು ಅಧ್ಯಯನ ವರದಿಗಳು ಹೇಳಿವೆ ಎಂದು ಸರ್ಕಾರ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಜೊತೆಗೆ ಇಂಥ ಕೆಲಸದ ವಾತಾವರಣದಿಂದಾಗಿ ಸಿಬ್ಬಂದಿಗಳು ಖಿನ್ನತೆ ಮೊದಲಾದ ಸಮಸ್ಯೆಗೆ ತುತ್ತಾಗುತ್ತಿದ್ದು, ಜಾಗತಿಕವಾಗಿ 120 ಕೋಟಿ ಕೆಲಸದ ದಿನಗಳು ನಷ್ಟವಾಗುತ್ತಿದೆ. ಇದರಿಂದಾಗಿ 85 ಲಕ್ಷ ಕೋಟಿ ರು.ನಷ್ಟು ನಷ್ಟವಾಗುತ್ತಿದೆ ಎಂದು ಹೇಳಿದೆ.
ಆಕ್ಷೇಪ:
ಇದೇ ವೇಳೆ ಭಾರತದ ಕಾರ್ಮಿಕ ಕಾನೂನುಗಳು ಸಿಬ್ಬಂದಿಗೆ ನಿತ್ಯದ ಗರಿಷ್ಠದ ಸಮಯದ ಮಿತಿ ಹಾಕಿವೆ. ಆದರೆ ವಿದೇಶಗಳಲ್ಲಿ ಕರ್ತವ್ಯದ ಅವಧಿಯಲ್ಲಿ ಹೊಂದಾಣಿಕೆಗೆ ಅವಕಾಶವಿದೆ. ಅಲ್ಲಿ ಕರ್ತವ್ಯದ ಅವಧಿಯನ್ನು ದೈನಂದಿನ ಬದಲಾಗಿ ವಾರ ಅಥವಾ ಮಾಸಿಕದ ಲೆಕ್ಕಾಚಾರ ಮಾಡಲಾಗುತ್ತದೆ. ಹೀಗಾಗಿ ಅಗತ್ಯವಿದ್ದಾಗ ಸಂಸ್ಥೆಗಳು ಸಿಬ್ಬಂದಿಯಿಂದ ಹೆಚ್ಚು ಕೆಲಸ ಮಾಡಲು ಅವಕಾಶ ಸಿಗುತ್ತದೆ. ಜಾಗತಿಕ ಮಟ್ಟದ ಕಂಪನಿಗಳೊಂದಿಗೆ ಸ್ಪರ್ಧೆ ಮಾಡುವ ನಿಟ್ಟಿನಲ್ಲಿ ಇಂಥ ನೀತಿ ಅವಶ್ಯಕ ಎಂದೂ ಸರ್ಕಾರ ಸಮೀಕ್ಷೆಯಲ್ಲಿ ಹೇಳಿದೆ.
ಭಾರತದಲ್ಲಿ ಹೀಗೆ ದೈನಂದಿನ, ವಾರ, ಮಾಸಿಕ, ವಾರ್ಷಿಕ ಮಿತಿ ಹಾಕಿರುವುದು ಉದ್ಯಮಗಳ ಬೆಳವಣಿಗೆ ಅಡ್ಡಿಯಾಗುವ ಜೊತೆಗೆ ಸಿಬ್ಬಂದಿಗಳ ಆದಾಯಕ್ಕೂ ಮಿತಿ ಹಾಕಿದೆ ಎಂದು ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿದೆ.
- ಕುಳಿತಲ್ಲೇ 12 ತಾಸು ಕೆಲಸ ಮಾನಸಿಕ ಸ್ವಾಸ್ಥ್ಯಕ್ಕೆ ಅಪಾಯ- 60, 90 ತಾಸು ದುಡಿಮೆ ಪ್ರಸ್ತಾಪಕ್ಕೆ ಸರ್ಕಾರದ ವಿರೋಧ?
ಸಮೀಕ್ಷೆಯಲ್ಲಿ ಇನ್ನೇನಿದೆ?1. ದೇಶದ ನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ ತಡೆಯಲು ಸಿಂಗಾಪುರದ ಮಾದರಿಯಲ್ಲಿ ಲಂಬವಾಗಿ ಗಿಡಗಳನ್ನು ನಿಟ್ಟು ಹಸಿರುಗೋಡೆ ನಿರ್ಮಿಸಬೇಕು2. ಮಾನವರಷ್ಟೇ ಸಮರ್ಥವಾಗಿ ನಿರ್ಧಾರಗಳನ್ನು ಕೈಗೊಳ್ಳಬಲ್ಲ ಸಾಮರ್ಥ್ಯವನ್ನು ಎಐ ಹೊಂದಿರುವುದರಿಂದ ಭವಿಷ್ಯದಲ್ಲಿ ಉದ್ಯೋಗ ನಷ್ಟವಾಗಬಹುದು3. 10 ಗ್ರಾಂಗೆ ಈಗಾಗಲೇ 83 ಸಾವಿರ ರು. ಗಡಿ ತಲುಪಿರುವ ಚಿನ್ನದ ಬೆಲೆ ಈ ವರ್ಷ ಕುಸಿತ ಕಾಣಲಿದೆ. ಆದರೆ ಬೆಳ್ಳಿಯ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ4. ಎಲ್ಲ ಹವಾಮಾನದಲ್ಲೂ ಉತ್ತಮವಾಗಿ ಬೆಳೆಯುವ ಬೆಳೆ ಅಭಿವೃದ್ಧಿಪಡಿಸುವುದು ಅಗತ್ಯಯ. ಕಾಳು, ಎಣ್ಣೆಬೀಜ, ಟೊಮೆಟೋ, ಈರುಳ್ಳಿ ಇಳುವರಿ ಹೆಚ್ಚಿಸಬೇಕು5. 2025-26 ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ.6.3ರಿಂದ 6.8ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. 4 ವರ್ಷಗಳಲ್ಲೇ ಕನಿಷ್ಠವಾದ ಶೇ.6.4ಕ್ಕೆ ಇಳಿಕೆ ಭೀತಿ ಕೂಡ ಇದೆ
--