ಸಾರಾಂಶ
ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಟ ಮುಂದುವರೆದಿದ್ದು, ಸೋಮವಾರ ಶ್ರೀನಗರ ಸಮೀಪ ಕುಲ್ಗಾಂ ಬಳಿ ಭದ್ರತಾ ಪಡೆ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಲಷ್ಕರ್ ಉಗ್ರ ರೆಹ್ಮಾನ್ ಭಾಯ್ ಸೇರಿ ಇಬ್ಬರು ಉಗ್ರರು ಹತರಾಗಿದ್ದಾರೆ.
ಜಮ್ಮು/ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಟ ಮುಂದುವರೆದಿದ್ದು, ಸೋಮವಾರ ಶ್ರೀನಗರ ಸಮೀಪ ಕುಲ್ಗಾಂ ಬಳಿ ಭದ್ರತಾ ಪಡೆ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಲಷ್ಕರ್ ಉಗ್ರ ರೆಹ್ಮಾನ್ ಭಾಯ್ ಸೇರಿ ಇಬ್ಬರು ಉಗ್ರರು ಹತರಾಗಿದ್ದಾರೆ. ಇದೇ ವೇಳೆ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಸೈನಿಕರೊಬ್ಬರು ಗಾಯಗೊಂಡಿದ್ದಾರೆ. ಇನ್ನೊಂದು ಕಡೆ ಗಡಿಯಲ್ಲಿ ನುಸುಳುಕೋರನನ್ನು ಬಂಧಿಸಲಾಗಿದೆ.
ಉಗ್ರರ ಇರುವಿಕೆ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಸೇನೆ, ಜಮ್ಮು ಕಾಶ್ಮೀರ ಪೊಲೀಸರು, ಸಿಆರ್ಪಿಎಫ್ ಪಡೆಗಳು ಹುಡುಕಾಟ ಆರಂಭಿಸಿದರು. ಈ ವೇಳೆ ಉಗ್ರರು ಭದ್ರತಾ ಪಡೆ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಸೇನೆ ನಡೆಸಿದ ದಾಳಿಯಲ್ಲಿ 2 ಉಗ್ರರು ಬಲಿಯಾಗಿದ್ದಾರೆ. ಉಗ್ರರ ಗುಂಡಿಗೆ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ನುಸುಳುಕೋರ ಸೆರೆ:
ಮತ್ತೊಂದೆಡೆ ಜಮ್ಮು ಸಮೀಪ ಒಕ್ಟ್ರಾಯ್ ಬಳಿ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾನುವಾರ ರಾತ್ರಿ 9.10ರ ಸುಮಾರಿಗೆ ಪಾಕ್ನ ಪಂಜಾಬ್ ಪ್ರಾಂತ್ಯದ ಸಿರಾಜ್ ಖಾನ್ ಎಂಬಾತ ಒಳನುಸುಳಲು ಯತ್ನಿಸಿದ್ದು, ಈತನನ್ನು ಬಿಎಸ್ಎಫ್ ಸಿಬ್ಬಂದಿ ಬಂಧಿಸಿದ್ದಾರೆ. ಜೊತೆಗೆ ಪಾಕ್ ರೇಂಜರ್ಸ್ವಿರುದ್ಧ ಪ್ರತಿಭಟನೆ ತೋರಿದ್ದಾರೆ.