ಸಾರಾಂಶ
ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಬುಧವಾರ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿಯಲ್ಲಿ 15 ಭಾರತೀಯ ನಾಗರಿಕರು ಮೃತ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಬುಧವಾರ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿಯಲ್ಲಿ 15 ಭಾರತೀಯ ನಾಗರಿಕರು ಮೃತಪಟ್ಟಿದ್ದು, 70 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಆದರೆ ಭಾರತದ ಸೈನಿಕರು ಸೂಕ್ತ ರೀತಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.
ಪಹಲ್ಗಾಂ ನರಮೇಧದ ಬಳಿಕ ಪ್ರತಿದಿನವೂ ಕದನ ವಿರಾಮ ಉಲ್ಲಂಘಿಸಿ ಭಾರತದ ಕಡೆಗೆ ಸತತವಾಗಿ 12 ದಿನ ಗುಂಡಿನ ದಾಳಿ ನಡೆಸಿದ್ದ ಪಾಕ್ ಪಡೆಗಳು ಮಂಗಳವಾರ ತಡರಾತ್ರಿ ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಭಾರತ ಕ್ಷಿಪಣಿ ದಾಳಿ ನಡೆಸಿದ ಬಳಿಕ ತಮ್ಮ ದಾಳಿಯನ್ನು ತೀವ್ರಗೊಳಿಸಿದವು.
ಪೂಂಛ್ ಮತ್ತು ಕುಪ್ವಾರಾದ ಹತ್ತಾರು ಮನೆಗಳಿಗೆ ಹಾನಿಯಾಗಿದೆ. ಪೂಂಛ್ನಲ್ಲಿ 28 ಜನ, ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ನಲ್ಲಿ 5 ಮಕ್ಕಳು ಸೇರಿದಂತೆ 10 ಜನ ಮತ್ತು ರಜೌರಿ ಜಿಲ್ಲೆಯ 3 ಜನ ಗಾಯಗೊಂಡಿದ್ದಾರೆ.
ಶೆಲ್ ದಾಳಿ ಪರಿಣಾಮ ಗಡಿ ಗ್ರಾಮದ ಮನೆಗಳು, ಕಟ್ಟಡಗಳು, ವಾಹನಗಳು, ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಗೊಳಗಾದವು. ಹೀಗಾಗಿ ಜನ ನಿದ್ರೆಯಿಲ್ಲದ ರಾತ್ರಿ ಕಳೆದಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.