ಸಾರಾಂಶ
‘ಜನ ಬೆಲೆ ಏರಿಕೆಯಿಂದ ಒದ್ದಾಡುತ್ತಾ ದಿನನಿತ್ಯದ ಅಗತ್ಯತೆಗಳಲ್ಲಿಯೂ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರೆ, ಸರ್ಕಾರ ಮಾತ್ರ ಕುಂಭಕರ್ಣನಂತೆ ಮಲಗಿದೆ’ ಎಂದು ಲೋಕಸಭೆಯಲ್ಲಿನ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ನವದೆಹಲಿ: ‘ಜನ ಬೆಲೆ ಏರಿಕೆಯಿಂದ ಒದ್ದಾಡುತ್ತಾ ದಿನನಿತ್ಯದ ಅಗತ್ಯತೆಗಳಲ್ಲಿಯೂ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರೆ, ಸರ್ಕಾರ ಮಾತ್ರ ಕುಂಭಕರ್ಣನಂತೆ ಮಲಗಿದೆ’ ಎಂದು ಲೋಕಸಭೆಯಲ್ಲಿನ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇಲ್ಲಿನ ಗಿರಿನಗರದ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ಕೆಲ ಗೃಹಿಣಿಯರೊಂದಿಗೆ ನಡೆಸಿದ ಮಾತುಕತೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಾಹುಲ್, ‘ಜನರ ಬೆಲೆ ಏರಿಕೆಯೊಂದಿಗೆ ಸೆಣಸಾಡುತ್ತಿದ್ದು, ದಿನನಿತ್ಯದ ಅಗತ್ಯ ಪೂರೈಸಲೂ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತಿದೆ. ಒಂದೊಮ್ಮೆ 40 ರು. ಇದ್ದ ಬೆಳ್ಳುಳ್ಳಿ ಬೆಲೆ ಇದೀಗ 400 ರು.ಗೆ ತಲುಪಿದೆ. ಬಟಾಣಿ ಕೆಜಿಗೆ 120 ರು. ಆಗಿದೆ. ಇದು ಎಲ್ಲರ ಹಣಕಾಸು ಲೆಕ್ಕಾಚಾರವನ್ನು ಅಡಿಮೇಲೆ ಮಾಡಿದೆ. ಜನ ಏನು ತಿನ್ನುತ್ತಾರೆ? ಏನು ಉಳಿಸುತ್ತಾರೆ?’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.==
‘ಆದಾಯ ಅಷ್ಟೇ ಇದ್ದರೂ ಬೆಲೆ ಮಾತ್ರ ಏರುತ್ತಿದ್ದು, ಖರ್ಚುವೆಚ್ಚಗಳನ್ನು ನಿರ್ವಹಿಸಲು ಗೃಹಿಣಿಯರು ಪಡುತ್ತಿರುವ ಕಷ್ಟಗಳ ಬಗ್ಗೆ ಚರ್ಚಿಸಿದೆ’ ಎಂದ ರಾಹುಲ್, ಬೆಲೆಏರಿಕೆ ಕುರಿತ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.ಇತ್ತೀಚೆಗಷ್ಟೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್, ಬುಲೆಟ್ ಟ್ರೇನ್ ಇನ್ನೂ ಬರಲಿಲ್ಲವಾದರೂ ವಸ್ತುಗಳ ಬೆಲೆಗಳು ಅದನ್ನೂ ಮೀರಿಸಿ ಮುನ್ನುಗ್ಗುತ್ತಿದೆ ಎಂದು ವ್ಯಂಗ್ಯವಾಡಿತ್ತು.