ಸಾರಾಂಶ
ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವುದು ಅತಿ ದುಬಾರಿಯಾಗಿರುವ ಕಾಲದಲ್ಲಿ, ಅವುಗಳು ರೋಗಿಗಳ ಪರಿವಾರವನ್ನು ಆರ್ಥಿಕವಾಗಿ ಶೋಷಿಸಬಾರದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.
ನವದೆಹಲಿ: ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವುದು ಅತಿ ದುಬಾರಿಯಾಗಿರುವ ಕಾಲದಲ್ಲಿ, ಅವುಗಳು ರೋಗಿಗಳ ಪರಿವಾರವನ್ನು ಆರ್ಥಿಕವಾಗಿ ಶೋಷಿಸಬಾರದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ರೋಗಿಗಳ ಚಿಕಿತ್ಸೆ ಹಾಗೂ ಚೇತರಿಕೆಗೆ ಅಗತ್ಯವಾದ ಔಷಧಿ, ಆಹಾರ, ವೈದ್ಯಕೀಯ ಸಾಧನಗಳನ್ನು ತಮ್ಮ ಔಷಧಾಲಯಗಳಿಂದಲೇ ಖರೀದಿಸಬೇಕೆಂದು ಆಸ್ಪತ್ರೆಗಳು ಒತ್ತಾಯಿಸುವ ಬಗ್ಗೆ ಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಇದನ್ನು ತಡೆಯಲು ನಿಯಮ ರೂಪಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ತಮ್ಮ ವೈಯಕ್ತಿಕ ಅನುಭವದ ಆಧಾರದಲ್ಲಿ ಸಿದ್ಧಾರ್ಥ ದಾಲ್ಮಿಯಾ ಎಂಬುವರು, ‘ಖಾಸಗಿ ಆಸ್ಪತ್ರೆಗಳು ತಮ್ಮ ಔಷಧಾಲಯಗಳಿಂದಲೇ ಎಲ್ಲವನ್ನೂ ಖರೀದಿಸುವಂತೆ ಒತ್ತಾಯಿಸುತ್ತವೆ. ಅಲ್ಲಿ ಗರಿಷ್ಠ ಚಿಲ್ಲರೆ ಬೆಲೆ(ಎಂಆರ್ಪಿ)ಗಿಂದ ಅಧಿಕ ಬೆಲೆ ನಿಗದಿಪಡಿಸಲಾಗಿರುತ್ತದೆ’ ಎಂದು ಆರೋಪಿಸಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾ।ಸೂರ್ಯಕಾಂತ್ ಅವರ ಪೀಠ, ಇದರ ವಿರುದ್ಧ ನಿಯಮ ರೂಪಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.