ಜೂ.4ರ ಬಳಿಕ ಮೋದಿಗೆ ರಜೆ, ಇದು ಜನರ ಗ್ಯಾರಂಟಿ: ಜೈರಾಂ

| Published : Apr 08 2024, 01:03 AM IST / Updated: Apr 08 2024, 05:52 AM IST

ಸಾರಾಂಶ

‘ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಛಾಯೆ ಕಾಣುತ್ತಿದೆ’ ಎಂಬ ಹಾಗೂ ‘ಮೋದಿ ಗ್ಯಾರಂಟಿ ನೋಡಿ ಇಂಡಿಯಾ ಕೂಟಕ್ಕೆ ನಡುಕ ಶುರುವಾಗಿದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ‘ನಮ್ಮ ಗ್ಯಾರಂಟಿ ಯೋಜನೆ ನೋಡಿ ಮೋದಿ ತತ್ತರಿಸಿ ಹೋಗಿದ್ದಾರೆ.

ನವದೆಹಲಿ: ‘ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಛಾಯೆ ಕಾಣುತ್ತಿದೆ’ ಎಂಬ ಹಾಗೂ ‘ಮೋದಿ ಗ್ಯಾರಂಟಿ ನೋಡಿ ಇಂಡಿಯಾ ಕೂಟಕ್ಕೆ ನಡುಕ ಶುರುವಾಗಿದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ‘ನಮ್ಮ ಗ್ಯಾರಂಟಿ ಯೋಜನೆ ನೋಡಿ ಮೋದಿ ತತ್ತರಿಸಿ ಹೋಗಿದ್ದಾರೆ. ಹೀಗಾಗಿಯೇ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್‌ ವಿರುದ್ಧ ಆಧಾರ ರಹಿತ ಹೇಳಿಕೆ ನೀಡುತ್ತಿದ್ದಾರೆ’ ಎಂದು ಹೇಳಿದೆ. ಅಲ್ಲದೆ ಜೂ.4ರ ಬಳಿಕ ಮೋದಿ ರಜೆಯ ಮೇಲೆ ತೆರಳುವುದು ಅನಿವಾರ್ಯ. ಇದು ದೇಶದ ಜನರ ಗ್ಯಾರಂಟಿ ಎಂದು ಹೇಳಿದೆ.

ಭಾನುವಾರ ಪ್ರತಿಕ್ರಿಯೆ ನೀಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ‘ದೇಶದ ಜನತೆ ಇದೀಗ ಮೋದಿಯ ಸುಳ್ಳುಗಳಿಂದ ಬೇಸತ್ತು ಹೋಗಿದ್ದಾರೆ. ಕಳೆದ 10 ವರ್ಷಗಳಿಂದ ನಡೆದ ಅನ್ಯಾಯಕ್ಕೆ ಒಳಗಾಗಿದ್ದ ಜನರಲ್ಲಿ ಇದೀಗ ಕಾಂಗ್ರೆಸ್‌ ಘೋಷಿಸಿರುವ ಪಂಚ ನ್ಯಾಯ ಮತ್ತು ಪಚ್ಚೀಸ್‌ ಗ್ಯಾರಂಟಿ ಭರವಸೆ ಹೊಸ ಆಶಾಭಾವನೆ ಮೂಡಿಸಿದೆ. ಕಾಂಗ್ರೆಸ್‌ನ ಗ್ಯಾರಂಟಿ, ಈ ಹೊತ್ತಿನ ಜನರ ಅಗತ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಸಂಕಷ್ಟದಲ್ಲಿರುವ ದೇಶದ ಜನರ ಧ್ವನಿಯಾಗಿದೆ’ ಎಂದು ಹೇಳಿದ್ದಾರೆ.