ಉತ್ತರ ಪ್ರದೇಶದ ಮಹಾ ಕುಂಭ ಮೇಳದ ಮೇಲೆ ದಾಳಿ : ಖಲಿಸ್ತಾನಿ ಉಗ್ರ ಪನ್ನೂ ಬೆದರಿಕೆ

| Published : Dec 27 2024, 12:48 AM IST / Updated: Dec 27 2024, 04:48 AM IST

ಸಾರಾಂಶ

ಮುಂದಿನ ತಿಂಗಳು ಉತ್ತರ ಪ್ರದೇಶದಲ್ಲಿ ನಡೆಯಲಿರುವ ಪವಿತ್ರ ಮಹಾ ಕುಂಭಮೇಳದ ಮೇಲೆ ದಾಳಿ ನಡೆಸುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್ ಪನ್ನು ವಿಡಿಯೋ ಮೂಲಕ ಬೆದರಿಕೆಯೊಡ್ಡಿದ್ದಾನೆ.

ಪ್ರಯಾಗ್‌ರಾಜ್: ಮುಂದಿನ ತಿಂಗಳು ಉತ್ತರ ಪ್ರದೇಶದಲ್ಲಿ ನಡೆಯಲಿರುವ ಪವಿತ್ರ ಮಹಾ ಕುಂಭಮೇಳದ ಮೇಲೆ ದಾಳಿ ನಡೆಸುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್ ಪನ್ನು ವಿಡಿಯೋ ಮೂಲಕ ಬೆದರಿಕೆಯೊಡ್ಡಿದ್ದಾನೆ.

ಸೋಮವಾರ ಫಿಲಿಬೀತ್‌ನಲ್ಲಿ ಮೂವರು ಖಲಿಸ್ತಾನಿ ಜಿಂದಾಬಾದ್‌ ಫೋರ್ಸ್‌ನ ಉಗ್ರರನ್ನು ಉತ್ತರ ಪ್ರದೇಶ ಮತ್ತು ಪಂಜಾಬ್ ಪೊಲೀಸರು ಎನ್‌ಕೌಂಟರ್‌ ನಡೆಸಿದ ಬೆನ್ನಲ್ಲೇ ಪನ್ನು ಈ ಬೆದರಿಕೆ ಹಾಕಿದ್ದಾನೆ. ಕುಂಭಮೇಳದ ಪ್ರಮುಖ ದಿನಗಳಾದ ಜ.14 (ಮಕರ ಸಂಕ್ರಾಂತಿ), ಜ.29 (ಮೌನಿ ಅಮಾವಾಸ್ಯೆ), ಫೆ.2 (ಬಸಂತ್‌ ಪಂಚಮಿ) ರಂದು ನಡೆಯಲಿರುವ ಆಚರಣೆಗೆ ಅಡ್ಡಿಪಡಿಸುವುದಾಗಿ ಒನ್ನು ಹೇಳಿದ್ದಾನೆ.

ಇನ್ನೂ ಪನ್ನೂನ್ ಬೆದರಿಕೆ ಬಗ್ಗೆ ಅಖಿಲ ಭಾರತೀಯ ಅಖಾಡ ಪರಿಷತ್‌ನ ಮಹಂತ್‌ ರವೀಂದ್ರ ಪುರಿ ಪ್ರತಿಕ್ರಿಯಿಸಿ, ‘ಪನ್ನೂನ್ ಎಂಬ ವ್ಯಕ್ತಿ ಮಹಾ ಕುಂಭಮೇಳಕ್ಕೆ ಪ್ರವೇಶಿಸಲು ಪ್ರಯತ್ನಿಸಿದರೆ ಅವನನ್ನು ಹೊಡೆದು ಓಡಿಸಲಾಗುವುದು. ಅಂತಹ ನೂರಾರು ಹುಚ್ಚರನ್ನು ನೋಡಿದ್ದೇವೆ. ಆದ್ದರಿಂದ ನಾವು ಅಂತಹ ಭ್ರಮೆಯ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ’ ಎಂದಿದ್ದಾರೆ.