ಸಾರಾಂಶ
ಏಕರೂಪ ನಾಗರಿಕ ಸಂಹಿತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ ಹಿನ್ನೆಲೆಯಲ್ಲಿ ಉತ್ತರಾಖಂಡದಲ್ಲಿ ಅದನ್ನು ಜಾರಿ ಮಾಡಲಾಗಿದೆ.
ಡೆಹ್ರಾಡೂನ್: ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ ಸರ್ಕಾರ ತಂದಿದ್ದಏಕರೂಪ ನಾಗರಿಕ ಸಂಹಿತೆ (ಯಿಸಿಸಿ) ಕಾಯ್ದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ ಹಾಕಿದ್ದಾರೆ. ಬಳಿಕ ರಾಜ್ಯ ಸರ್ಕಾರ ಇದರ ಜಾರಿಗೆ ಬುಧವಾರ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ಯುಸಿಸಿ ಹೊಂದಿದ ಸ್ವತಂತ್ರ ಭಾರತದ ಮೊದಲ ರಾಜ್ಯ ಎಂಬ ಕೀರ್ತಿಗೆ ಉತ್ತರಾಖಂಡ ಭಾಜನವಾಗಿದೆ.
ಕಳೆದ ತಿಂಗಳು ವಿಧಾನಸಭೆ ಧ್ವನಿ ಮತದ ಮೂಲಕ ಸಂಹಿತೆ ಅಂಗೀಕರಿಸಿತ್ತು. ಸಂಹಿತೆ ಪ್ರಕಾರ ಲಿವ್-ಇನ್ ಸಂಬಂಧವನ್ನು ನೋಂದಾಯಿಸಲು ವಿಫಲರಾದವರು 6 ತಿಂಗಳ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಈ ಕಾನೂನು ಬಹುಪತ್ನಿತ್ವ ಮತ್ತು ಹಲಾಲಾವನ್ನು ನಿಷೇಧಿಸುತ್ತದೆ.ಉತ್ತರಾಖಂಡ ಬಳಿಕ ಗುಜರಾತ್, ಅಸ್ಸಾಂ ಸೇರಿ ಹಲವು ಬಿಜೆಪಿ ಆಡಳಿತದ ರಾಜ್ಯಗಳು ಯುಸಿಸಿ ಜಾರಿಗೊಳಿಸಲು ಆಸಕ್ತಿ ತೋರಿಸಿವೆ.