ಅಗ್ನಿವೀರರು ಹುತಾತ್ಮರಾದರೆ 1 ಕೋಟಿ ರು. ಪರಿಹಾರ ನೀಡಲಾಗುವುದು ಎಂದು ಲೋಕಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೀಡಿದ ಹೇಳಿಕೆ ಸುಳ್ಳು ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ನವದೆಹಲಿ: ಗ್ನಿವೀರರು ಹುತಾತ್ಮರಾದರೆ 1 ಕೋಟಿ ರು. ಪರಿಹಾರ ನೀಡಲಾಗುವುದು ಎಂದು ಲೋಕಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೀಡಿದ ಹೇಳಿಕೆ ಸುಳ್ಳು ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಬುಧವಾರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹುತಾತ್ಮ ಅಗ್ನಿವೀರ ಅಜಯ್ ಸಿಂಗ್ ಅವರ ತಂದೆ ನೀಡುವ ಹೇಳಿಕೆಯನ್ನೂ ಅದರಲ್ಲಿ ತೋರಿಸಿದ್ದಾರೆ. ಅದರಲ್ಲಿ ಅಜಯ ಸಿಂಗ್‌ ಅವರ ತಂದೆಯು, ‘ರಾಜನಾಥ್‌ ಅವರು ಲೋಕಸಭೆಯಲ್ಲಿ ಹೇಳಿದಂತೆ ನಮಗೆ ಯಾವುದೇ ಪರಿಹಾರ ಬಂದಿಲ್ಲ. ಹೀಗಾಗಿ ಲೋಕಸಭೆಯಲ್ಲಿ ನಮ್ಮ ಪರ ರಾಹುಲ್‌ ದನಿ ಎತ್ತಿದ್ದಾರೆ’ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಹುಲ್‌, ‘ಸತ್ಯದ ರಕ್ಷಣೆ ಪ್ರತಿಯೊಂದು ಧರ್ಮದ ಆಧಾರವಾಗಿದೆ. ಆದರೆ ಹುತಾತ್ಮ ಅಗ್ನಿವೀರ್ ಕುಟುಂಬಕ್ಕೆ ನೀಡಿದ ನೆರವಿನ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಸುಳ್ಳು ಹೇಳಿದ್ದಾರೆ. ಹುತಾತ್ಮ ಯೋಧ ಅಗ್ನಿವೀರ್ ಅಜಯ್ ಸಿಂಗ್ ಅವರ ತಂದೆಯೇ ಅವರ ಸುಳ್ಳುಗಳ ಬಗ್ಗೆ ಸತ್ಯವನ್ನು ಹೇಳಿದ್ದಾರೆ. ರಕ್ಷಣಾ ಸಚಿವರು ಸಂಸತ್ತು, ದೇಶ, ಸೇನೆ ಮತ್ತು ಹುತಾತ್ಮ ಅಗ್ನಿವೀರ್ ಅಜಯ್ ಸಿಂಗ್ ಅವರ ಕುಟುಂಬದ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.

==

ಬಿಜೆಪಿ ಹಿಂಸಾಚಾರಿ ಎಂಬುದಕ್ಕೆ ಗುಜರಾತ್‌ ಘಟನೆಯೇ ಸಾಕ್ಷಿ: ರಾಹುಲ್‌ 

ನವದೆಹಲಿ: ಹಿಂದುಗಳೆಂದು ತಮ್ಮನ್ನು ಕರೆದುಕೊಳ್ಳುವವರು ನಿರಂತರವಾಗಿ ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಲೋಕಸಭೆಯಲ್ಲಿ ಟೀಕಿಸಿ ಭಾರೀ ಟೀಕೆಗೆ ತುತ್ತಾಗಿದ್ದ ಲೋಕಸಭೆಯಲ್ಲಿನ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಬುಧವಾರ ಬಿಜೆಪಿ ವಿರುದ್ಧ ಮತ್ತೆ ಇದೇ ಆರೋಪ ಮಾಡಿದ್ದಾರೆ.ಹಿಂದುತ್ವದ ಕುರಿತ ರಾಹುಲ್‌ ಹೇಳಿಕೆ ವಿರೋಧಿಸಿ ಬಜರಂಗ ದಳ ಮತ್ತು ವಿಎಚ್‌ಪಿಯ ಕೆಲ ಕಾರ್ಯಕರ್ತರು ಮಂಗಳವಾರ ಗುಜರಾತ್‌ನಲ್ಲಿ ಕಾಂಗ್ರೆಸ್‌ ಕಚೇರಿ ಮೇಲೆ ದಾಳಿ ನಡೆಸಿದ್ದರು.ಈ ಕುರಿತು ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ರಾಹುಲ್‌, ‘ಗುಜರಾತ್ ಕಾಂಗ್ರೆಸ್‌ ಕಚೇರಿ ಮೇಲಿನ ಕೃತ್ಯ ಹೇಡಿತನದ್ದು. ಇದು ಬಿಜೆಪಿ ಮತ್ತು ಸಂಘ ಪರಿವಾರದ ಕುರಿತ ನನ್ನ ಅಭಿಪ್ರಾಯವನ್ನು ಮತ್ತೊಮ್ಮೆ ದೃಢಪಡಿಸಿದೆ. ಹಿಂಸೆಯನ್ನು ಹರಡುವ ಬಿಜೆಪಿಗರು ಧರ್ಮದ ಮೂಲತತ್ವಗಳನ್ನೇ ಅರಿತುಕೊಂಡಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.