ಸಂಸತ್ತಲ್ಲಿ ‘ರಾಮಾಯಣ: ದಿ ಲೆಜೆಂಡ್ ಆಫ್‌ ಫ್ರಿನ್ಸ್’ ಚಿತ್ರ ಫೆ.15ಕ್ಕೆ ಪ್ರದರ್ಶನ

| N/A | Published : Feb 02 2025, 11:46 PM IST / Updated: Feb 03 2025, 04:55 AM IST

ಸಾರಾಂಶ

ಚಲನಚಿತ್ರ ವಿತರಣಾ ಕಂಪನಿ ಗೀಕ್ ಪಿಕ್ಚರ್ಸ್‌ 1993ರ ಜಪಾನೀಸ್‌ ಭಾರತೀಯ ಆನಿಮೇಟೆಡ್‌ ಚಿತ್ರ ‘ರಾಮಾಯಣ: ದಿ ಲೆಜೆಂಡ್ ಆಫ್‌ ಫ್ರಿನ್ಸ್ ಸಿನಿಮಾ ಫೆ.15ರಂದು ಸಂಸತ್ತಿನಲ್ಲಿ ವಿಶೇಷ ಪ್ರದರ್ಶನ ಆಯೋಜಿಸಲು ಸಿದ್ಧವಾಗಿದೆ.

ನವದೆಹಲಿ: ಚಲನಚಿತ್ರ ವಿತರಣಾ ಕಂಪನಿ ಗೀಕ್ ಪಿಕ್ಚರ್ಸ್‌ 1993ರ ಜಪಾನೀಸ್‌ ಭಾರತೀಯ ಆನಿಮೇಟೆಡ್‌ ಚಿತ್ರ ‘ರಾಮಾಯಣ: ದಿ ಲೆಜೆಂಡ್ ಆಫ್‌ ಫ್ರಿನ್ಸ್ ಸಿನಿಮಾ ಫೆ.15ರಂದು ಸಂಸತ್ತಿನಲ್ಲಿ ವಿಶೇಷ ಪ್ರದರ್ಶನ ಆಯೋಜಿಸಲು ಸಿದ್ಧವಾಗಿದೆ.

 ಈ ಬಗ್ಗೆ ಸಂಸ್ಥೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ‘ ಚಿತ್ರ ಪ್ರದರ್ಶನದಲ್ಲಿ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಮತ್ತು ಸಂಸತ್ತಿನ ಸದಸ್ಯರು ಮತ್ತು ಸಾಂಸ್ಕೃತಿಕ ವಲಯಗಳ ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ. ಚಿತ್ರ ಪ್ರದರ್ಶನಕ್ಕೆ ಭಾರತದ ಸಂಸತ್ತು ಅವಕಾಶ ನೀಡುತ್ತಿರುವುದಕ್ಕೆ ಕೃತಜ್ಞತೆಗಳೂ. ನಮ್ಮ ಕೆಲಸವನ್ನುಈ ರೀತಿ ಗುರುತಿಸುವುದು ದೊಡ್ಡ ಗೌರವವಾಗಿದೆ. ಈ ಪ್ರದರ್ಶನವು ಕೇವಲ ಚಿತ್ರ ಪ್ರದರ್ಶನವಲ್ಲ. ಬದಲಿಗೆ ನಮ್ಮ ಶ್ರೀಮಂತ ಪರಂಪರೆ ಮತ್ತು ರಾಮಾಯಣದ ಕಥೆಯ ಆಚರಣೆಯಾಗಿದೆ. ಇದು ನಮಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುತ್ತಿದೆ’ ಎಂದಿದೆ.

ಕೆನ್ನೆಗೆ ಮುತ್ತಿಕ್ಕಿದವಳಿಗೆ ತುಟಿಗೆ ಮುತ್ತುಕೊಟ್ಟು ಉದಿತ್‌ ನಾರಾಯಣ್‌

ನವದೆಹಲಿ: ಖ್ಯಾತ ಗಾಯಕ ಉದಿತ್ ನಾರಾಯಣ್ ಲೈವ್ ಶೋ ಒಂದರಲ್ಲಿ ಸೆಲ್ಫಿ ತೆಗೆದುಕೊಳ್ಳಲು ಬಂದ ಮಹಿಳಾ ಅಭಿಮಾನಿಯೊಬ್ಬರ ತುಟಿಗೆ ಚುಂಬಿಸಿದ ಘಟನೆ ಭಾರೀ ಟೀಕೆಗೆ ಕಾರಣವಾಗಿದೆ. ಕಾರ್ಯಕ್ರಮವೊಂದರಲ್ಲಿ ಉದಿತ್ ನಾರಾಯಣ್ ತಮ್ಮ ಜನಪ್ರಿಯ ಗೀತೆ ‘ಟಿಪ್ ಟಿಪ್ ಬರಸಾ ಪಾನಿ’ ಹಾಡುತ್ತಿದ್ದರು. ಅದೇ ವೇಳೆ, ಮಹಿಳೆಯೊಬ್ಬರು ಸೆಲ್ಫಿ ಬಯಸಿದ್ದಾರೆ. ಹೀಗಾಗಿ ಅವರನ್ನು ವೇದಿಕೆ ಬಳಿ ಕಳುಹಿಸುವಂತೆ ಉದಿತ್‌ ಭದ್ರತಾ ಸಿಬ್ಬಂದಿಗೆ ಸೂಚಿಸಿದ್ದಾರೆ. ಹೀಗೆ ಬಂದ ಆಕೆ ಉದಿತ್‌ ಜೊತೆ ಸೆಲ್ಫಿ ತೆಗೆದ ಬಳಿಕ ಅವರ ಕೆನ್ನೆಗೆ ಮುತ್ತಿಕ್ಕಿದ್ದಾರೆ.

 ಅದಾದ ಬೆನ್ನಲ್ಲೇ ಉದಿತ್‌, ಮಹಿಳೆ ತುಟಿಗೆ ಮುತ್ತಿಕ್ಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದೆ. ಅನೇಕರು ಉದಿತ್ ಕ್ಷಮೆಗೆ ಒತ್ತಾಯಿಸಿದ್ದರೆ, ಇನ್ನು ಅನೇಕರು, ಮೊದಲು ಮಹಿಳೆ ಚುಂಬಿಸಿದ್ದಾಳೆ, ಎಲ್ಲದಕ್ಕೂ ಪುರುಷನನ್ನೇ ತಪ್ಪಿತಸ್ಥನನ್ನಾಗಿಸುವುದು ಸರಿಯಲ್ಲ ಎಂದಿದ್ದಾರೆ.

ಇಸ್ರೋ 100ನೇ ಉಡ್ಡಯನ ಭಾಗವಾಗಿದ್ದ ಉಪಗ್ರಹದಲ್ಲಿ ಸಣ್ಣ ತಾಂತ್ರಿಕ ದೋಷ ಪತ್ತೆ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇತ್ತೀಚೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿದ್ದ ಉಪಗ್ರಹದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ಕುರಿತು ತನ್ನ ವೆಬ್‌ಸೈಟ್‌ನಲ್ಲಿ ಇಸ್ರೋ ಮಾಹಿತಿ ಹಂಚಿಕೊಂಡಿದ್ದು, ‘ಉಪಗ್ರಹವನ್ನು ನಿಗದಿತ ಕಕ್ಷೆಗೆ ಕೊಂಡೊಯ್ಯುವ ಭಾಗವಾಗಿ ಅದರ ಕಕ್ಷೆಯನ್ನು ಏರಿಕೆ ಮಾಡಲು ಪ್ರಯತ್ನಿಸಿದಾಗ ಥ್ರಸ್ಟರ್‌ಗಳ  ಚಾಲನೆಗೆ ಬೇಕಿದ್ದ ಆಕ್ಸಿಡೈಸರ್‌ನ ಕವಾಟಗಳು ತೆರೆದುಕೊಳ್ಳಲಿಲ್ಲ. ಹೀಗಾಗಿ ಇದನ್ನು ಈಗಿರುವ ಕಕ್ಷೆಯಲ್ಲೇ ಬಳಸಿಕೊಳ್ಳಲು ಸಿದ್ಧತೆ ನಡೆಯುತ್ತಿದೆ. ಆದರೆ ಉಪಗ್ರಹದ ಸ್ಥಿತಿ ಸ್ಥಿರವಾಗಿದೆ. ಎಂದು ತಿಳಿಸಿದೆ.ಯು.ಆರ್‌. ರಾವ್‌ ಉಪಗ್ರಹ ಕೇಂದ್ರ ತಯಾರಿಸಿದ ಎನ್‌ವಿಎಸ್‌-02 ಉಪಗ್ರಹವನ್ನು ಭಾರತದ ಮೇಲಿನ ಭೂಸ್ಥಿರ ಕಕ್ಷೆಯಲ್ಲಿ ಕೂರಿಸುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು.

ರಾಜಸ್ಥಾನದ ಬಿಕಾನೇರಲ್ಲಿ 3.6 ತೀವ್ರತೆಯ ಭೂಕಂಪ ಯಾವುದೇ ಸಾವು ನೋವಿಲ್ಲ

ಜೈಪುರ: ರಾಜಸ್ಥಾನದ ಬಿಕಾನೇರ್‌ನಲ್ಲಿ ಭಾನುವಾರ ಮಧ್ಯಾಹ್ನ ಭೂಮಿ ಕಂಪಿಸಿದ್ದು, ರಿಕ್ಟರ್‌ ಮಾಪಕದಲ್ಲಿ 3.6ರಷ್ಟು ತೀವ್ರತೆ ದಾಖಲಾಗಿದೆ. ಅದೃಷ್ಟವಶಾತ್‌ ದುರಂತದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಹವಾಮಾನ ಇಲಾಖೆಯು ಈ ಬಗ್ಗೆ ಮಾಹಿತಿ ನೀಡಿದ್ದು, ಭಾನುವಾರ ಮಧ್ಯಾಹ್ನ 12.58ಕ್ಕೆ ಬಿಕಾನೇರ್‌ ಮತ್ತು ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ವೆಬ್‌ಸೈಟ್‌ ಪ್ರಕಾರ. ಭೂಕಂಪನದ ಕೇಂದ್ರಬಿಂದು ಬಿಕಾನೇರ್‌ ಆಗಿದ್ದು, ಇದರಲ್ಲಿ 3.6ರಷ್ಟು ತೀವ್ರತೆ ದಾಖಲಾಗಿದೆ.