ಅಯೋಧ್ಯೆ ದೇಣಿಗೆ ಲೂಟಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳ ಮೇಲೆ ಪೊಲೀಸ್ ಕ್ರಮಕ್ಕೆ ಆಗ್ರಹಿಸಿ ವಿಪಕ್ಷಗಳ ಗದ್ದಲದಿಂದಾಗಿ ಸೋಮವಾರವೂ ಲೋಕಸಭೆ, ರಾಜ್ಯಸಭೆಯಲ್ಲಿ ಸುಗಮ ಕಲಾಪ ನಡೆಯಲಿಲ್ಲ.
ಸಂಸತ್ ಆವರಣದಲ್ಲಿಯೂ ವಿಪಕ್ಷ ನಾಯಕರ ಪ್ರತಿಭಟನೆ--
ನವದೆಹಲಿ: ಅಯೋಧ್ಯೆ ದೇಣಿಗೆ ಲೂಟಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳ ಮೇಲೆ ಪೊಲೀಸ್ ಕ್ರಮಕ್ಕೆ ಆಗ್ರಹಿಸಿ ವಿಪಕ್ಷಗಳ ಗದ್ದಲದಿಂದಾಗಿ ಸೋಮವಾರವೂ ಲೋಕಸಭೆ, ರಾಜ್ಯಸಭೆಯಲ್ಲಿ ಸುಗಮ ಕಲಾಪ ನಡೆಯಲಿಲ್ಲ.ಲೋಕಸಭೆಯಲ್ಲಿ ನೀಟ್ ವಿವಾದ ಹಾಗೂ ರಾಮಮಂದಿರ ದೇಣಿಗೆ ಕಳ್ಳತನ ಘಟನೆ ವಿಚಾರವನ್ನಿಟ್ಟುಕೊಂಡು ವಿಪಕ್ಷಗಳು ಮುಗಿಬಿದ್ದವು. ಸುಗಮ ಕಲಾಪಕ್ಕೆ ಸ್ಪೀಕರ್ ಪದೇ ಪದೇ ಮನವಿ ಮಾಡಿದರೂ ಅನುವು ಮಾಡಲಿಲ್ಲ. ಬಳಿಕ ಕಲಾಪವನ್ನು ಮಧ್ಯಾಹ್ನ 2 ಗಂಟೆ ತನಕ ಮುಂದೂಡಲಾಯಿತು. ಆ ಬಳಿಕ ಮತ್ತೆ ಸದನ ಆರಂಭವಾದಾಗ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ ಹೆಚ್ಚಳ, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಬಿಲ್, 2026 ಮತ್ತು ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಬಿಲ್ 2026 ಮಸೂದೆಗೆ ವಿಪಕ್ಷಗಳ ಘೋಷಣೆಗಳ ನಡುವೆ ಧ್ವನಿ ಮತದ ಮೂಲಕ ಮಂಡಿಸಲಾಯಿತು.
ರಾಜ್ಯಸಭೆಯಲ್ಲಿ ವಿಪಕ್ಷಗಳು ಕೋಲಾಹಲ ಸೃಷ್ಟಿಯಿಂದಾಗಿ ಮಧ್ಯಾಹ್ನದ ತನಕ ಕಲಾಪ ಮುಂದೂಡಿಕೆಯಾಯಿತು. ವಿದ್ಯಾರ್ಥಿಗಳ ಮೇಲೆ ಪೊಲೀಸರ ಕ್ರಮದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಸದನದಲ್ಲಿ ಮಾತನಾಡಬೇಕೆಂದು ಪಟ್ಟು ಹಿಡಿದರು. ಕೆಲ ಸಂಸದರು ಫಲಕಗಳನ್ನು ಪ್ರದರ್ಶಿಸಿದರು. ಈ ವೇಳೆ ಸ್ಪೀಕರ್ ಇಂತಹ ನಡವಳಿಕೆ ಸರಿಯಲ್ಲ , ಇದು ಮುಂದುವರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಈ ನಡುವೆ ಸಂಸತ್ ಆಚೆಗೂ ವಿಪಕ್ಷ ಸಂಸದರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.