ಸಾರಾಂಶ
ಮುಂಬೈ : ಸತತ 9ನೇ ಸಲ ರೆಪೋ ದರವನ್ನು ಶೇ.6.5ರಲ್ಲೇ ಮುಂದುವರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಆಹಾರ ಹಣದುಬ್ಬರ ಹೆಚ್ಚಿರುವ ಕಾರಣ ಅದನ್ನು ನಿಯಂತ್ರಿಸುವ ಉದ್ದೇಶದಿಂದ ಬಡ್ಡಿದರದಲ್ಲಿ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ.
ಗುರುವಾರ ಆರ್ಬಿಐ ದ್ವೈಮಾಸಿಕ ನೀತಿ ಪ್ರಕಟಿಸಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ರೆಪೋ ದರದ ಯಥಾಸ್ಥಿತಿ ಮುಂದುವರಿಕೆ ಪ್ರಕಟಿಸಿದರು. ಇದೇ ವೇಳೆ, ಈ ಹಿಂದೆಯೇ ಹೇಳಿದಂತೆ ಶೇ.7.2ರ ದರದಲ್ಲಿ ಭಾರತದ ಆರ್ಥಿಕತೆ ಈ ಸಾಲಿನಲ್ಲಿ ಬೆಳವಣಿಗೆ ಆಗಹುದು. ಹಣದುಬ್ಬರ ಶೇ.4.5 ಇರಬಹುದು ಎಂದು ಅಂದಾಜಿಸಲಾಗಿದೆ ಎಂದರು.
ಠೇವಣಿ ಇಳಿಕೆ ಬಗ್ಗೆ ಕಳವಳ: ಜನರು ಬ್ಯಾಂಕ್ನಲ್ಲಿ ತಮ್ಮ ಹಣ ಠೇವಣಿ ಇಟ್ಟು ಅದನ್ನು ಬಂಡವಾಳ ಹೂಡಿಕೆಯ ವಿಧಾನ ಮಾಡಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಠೇವಣಿ ಬದಲು ಅವರು ಅನ್ಯ ಹೂಡಿಕೆಯತ್ತ ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಜನರನ್ನು ತಮ್ಮತ್ತ ಆಕರ್ಷಿಸಲು ಬ್ಯಾಂಕ್ಗಳು ಪರ್ಯಾಯ ತಂತ್ರ ರೂಪಿಸಬೇಕು ಎಂದು ದಾಸ್ ಕರೆ ನೀಡಿದರು.---
2 ದಿನ ಬದಲು ಕೆಲವೇ ತಾಸಲ್ಲಿ ಚೆಕ್ ಕ್ಲಿಯರೆನ್ಸ್
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಚೆಕ್ ಕ್ಲಿಯರಿಂಗ್ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಯನ್ನು ಘೋಷಿಸಿದೆ. ಹೊಸ ವ್ಯವಸ್ಥೆಯು ಚೆಕ್ ಕ್ಲಿಯರಿಂಗ್ಗೆ ಅಗತ್ಯವಿರುವ ಸಮಯವನ್ನು ಪ್ರಸ್ತುತ 2 ದಿನಗಳ ಅವಧಿಯಿಂದ ಕೆಲವೇ ಗಂಟೆಗಳವರೆಗೆ ಕಡಿತಗೊಳಿಸುವ ಗುರಿ ಹೊಂದಿದೆ. ‘ಶೀಘ್ರ ಈ ಬಗ್ಗೆ ನಿಯಮಾವಳಿ ಬಿಡುಗಡೆ ಮಾಡಲಾಗುವುದು’ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.