ಸಾರಾಂಶ
ಇದು ನಿಜವಾದ ರಾಮರಾಜ್ಯ ಎಂದು ನಿರಾಶ್ರಿತರು ಹರ್ಷ ವ್ಯಕ್ತಪಡಿಸಿದ್ದಾರೆ.
ನವದೆಹಲಿ/ಜೋಧ್ಪುರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯ ಬೆನ್ನಲ್ಲೇ ದೆಹಲಿಯಲ್ಲಿ ಹಾಗೂ ರಾಜಸ್ಥಾನದ ಜೋಧಪುರದಲ್ಲಿ ನೆಲೆಸಿರುವ ಪಾಕಿಸ್ತಾನದ ನಿರಾಶ್ರಿತ ಹಿಂದೂಗಳು ಮಂಗಳವಾರ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.
ಈ ಕಾಯ್ದೆಯಿಂದ ನಾವು ಸುರಕ್ಷಿತ ಭವಿಷ್ಯಕ್ಕಾಗಿ ಎದುರು ನೋಡಬಹುದು. ನಮಗೆ ಆರಂಭದಲ್ಲಿ ಪಾಕಿಸ್ತಾನದಿಂದ ಬಂದಾಗ ನಮಗೆ ಮೂಲಭೂತ ಸೌಕರ್ಯಗಳು ಸಿಗುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಸಿಎಎ ಕಾಯ್ದೆ ಜಾರಿಗೆ ಮಾಡಿರುವುದು ಹರ್ಷ ತಂದಿದೆ ಎಂದು ದೆಹಲಿಯಲ್ಲಿ ನೆಲೆಸಿರುವ ಪಾಕಿಸ್ತಾನದ ನಿರಾಶ್ರಿತ ಹಿಂದೂಗಳು ತಿಳಿಸಿದ್ದಾರೆ.ಜೋಧಪುರದಲ್ಲಿ ನೆಲೆಸಿರುವ ಪಾಕಿಸ್ತಾನದ ನಿರಾಶ್ರಿತ ಹಿಂದೂಗಳು ‘ಇದು ನಿಜವಾದ ರಾಮ ರಾಜ್ಯ’ ಎಂದು ಹೇಳುವ ಮೂಲಕ ಸಿಎಎ ಜಾರಿಗೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.ಈ ಕ್ಷಣಕ್ಕಾಗಿ ನಾವು ಹಲವಾರು ದಿನಗಳಿಂದ ಕಾಯುತ್ತಿದ್ದೆವು. ನಾವೆಲ್ಲರೂ ಶೀಘ್ರದಲ್ಲಿ ಭಾರತದ ಪ್ರಜೆಗಳಾಗಲಿದ್ದೇವೆ ಎಂದು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.